ಬುಧವಾರ, ಮಾರ್ಚ್ 04, 2015

ಗಂಟಿಗೆ ನಂಟು

ಮೂರು ಗಂಟಾಕಿ
ಮುತೈದೆಯಾಗಿಸಿದೆ
ಮೂರು ತಿಂಗಳಿಗಷ್ಟೆ
ಮೂವತ್ತಾಯಿತು ಎನಗೆ
ಮೂರು ವರುಷ
ನಿನ್ನ ಕಂದನಿಗೆ
ಕೂತು ತಿನ್ನಲು
ಗಂಟೇನು ಮಾಡದಿದ್ದರೂ
ಮೂರು ತಿಂಗಳ
ನಂಟು ಜನುಮ
ಪೂರ ನೆನಪಿಸುತ್ತೆ
ಒಂಟಿತನ ಕಂಡು
ಮತ್ತೊಮ್ಮೆ ಗಂಟಾಕಿ
ನಂಟನು ಬೆಳೆಸಲು
ಮತ್ತೊಬ್ಬ ಬಯಸಿರುವನು
ಒಪ್ಪಿಗೆ ನೀಡಿದರೆ
ಮುನಿಸೆ ನಿನಗೆ
ಅಪ್ಪನ ಹೆಸರು
ಬೇಕಿದೆ ಶಾಲೆಗೆ
ಯಾವುದು ಕೊಡಲೆಂದು
ಚಿಂತಿಸುತ್ತಿರುವೆ...???

ಗುರುವಾರ, ಆಗಸ್ಟ್ 14, 2014

ಸ್ವಸಂತ್ರ ದಿನ by ಸಾಸಕರು

ಪ್ರತಿ ವರ್ಷದಂಗೆ ಈ ಕಿತನೂ ಸ್ವಸಂತ್ರ ದಿನ ಮಾಡಣ ಅಂತ ಸಾಸಕರ ಹತ್ರ ಹೋದ್ವಿ. ಸಾಸಕರು ಸ್ಯಾನೆ ಖುಸಿನಾಗಿದ್ರೂ ಮಖ ಯಾಕೊ ವಸಿ ಬಾಡಿತ್ತು. ನೋಡ್ರಲಾ ಈಗ ನಾನು ಸಾಸಕ ಅಲ್ಲ ಲೋಕಸಭಾ ಸದಸ್ಯ...ಡೆಲ್ಲಿಗೋಗಿ ಬಂದಿವ್ನಿ..ಹೋದ ಸಲಕಿಂತ ಜೋರಾಗಿ ಮಾಡಬೇಕು ಕನ್ರಲಾ ಅಂದರು. ಆಯ್ತಣ್ಣೊ ಅಂತ ಯಲ್ಲ ಒಪ್ಪಿಕೊಂಡ್ವಿ....ಸ್ಯಾನೆ ಜನ ಸೇರಿಸಬೇಕು ಕನ್ರಲಾ...ಟಿವಿನಾಗೆ ಬರಬೇಕು. ಹೋದ ಕಿತ ತರ ಕಾಂಗ್ರಸ್ ಬಾವುಟ ಕಟ್ಟದೆ ನಮ್ಮ ದೇಸದ ಬಾವುಟನೇ ಕಟ್ಟಬೇಕು...ದಾರ ಯಳಿತ್ತಿದ್ದಂಗೆ ಬಿಚ್ಚಿಕೊಬೇಕು ಬಾವುಟ ಅಂದರು. ಆಯ್ತಣ್ಣೊ ಕಿಸ್ನನ ಲಾಡಿ ತರನೇ ಕಟ್ಟುತ್ತೀವಿ ಅಂದ ಕಳ್ ಮಂಜ. ಹತ್ತು ಸಾವಿರ ಚೇರ್ ಹಾಕಿಸ್ರಲಾ ಮೈದಾನದಾಗೆ ಅಂದ್ರು..ಆಯ್ತಣ್ಣೊ ಅಂತ ಒಂದಷ್ಟು ಕಾಸು ಕಿತ್ಕೊಂಡು ಬಂದ್ವಿ....ಕಳ್ ಮಂಜ ಯಲ್ಲ ಅರೆಂಜ್ ಮೆಂಟ್ ಮಾಡ್ತೀನಿ ಅಂತ ವಹಿಸಿಕೊಂಡ. ಮೈದಾನ ದಾಗೆ ಶಾಮಿಯಾನ, ಮೈಕ್ ಸೆಟ್ಟು, ಹತ್ತು ಸಾವಿರ ಚೇರು, ಜನರಿಗೆ ತಿಂಡಿ ತೀರ್ಥ ಯಲ್ಲಾ ವ್ಯವಸ್ಥೆ ಆತು. 

ಸ್ವಸಂತ್ರದ ದಿನ ಬಂದೇ ಬುಡ್ತು. ಜನ ಸಿಕ್ಕಾಪಟ್ಟೆ ಜಮಾಯಿಸಿದ್ರು. ವೇದಿಕೆ ಮ್ಯಾಗೆ ಗಣ್ಯ ವ್ಯಕ್ತಿಗಳು ಕುಂತಿದ್ದರು. ಸಾಸಕರು ಬಂದು ಬಾವುಟ ಹಾರಿಸಿದ್ರು. ಆದ್ರೆ ಯಾಕೊ ಚೇರ್ ಮ್ಯಾಗೆ ಕೂರಲೇ ಇಲ್ಲ....ಯಾಕಲಾ ಕೂರಕಿಲಾ ಈ ವಯ್ಯ ಅಂದ ಮಂಜ....ಬೇಗ ಹೋಗಬೇಕೆನೊ ಬುಡಲಾ ಅಂದ ಕಿಸ್ನ....ಹಾರ ಹಾಕಿದ್ದು ಆತು. ಭಾಷಣ ಕೊರೆದ್ರು....ಮೈಕ್ ತಕ್ಕಂಡು ಗಾಂಧೀಜಿ ಬಗ್ಗೆ ಮಾತಾಡದೆ ವಿವೇಕಾನಂದನ ಬಗೆ ಮಾತಾಡುತ್ತ ಇದ್ದರು....

ಜನರಿಗೆ ಕಂಪ್ಯೂಜ್ ಆತು...ವಿವೇಕಾನಂದನೂ ಸ್ವಸಂತ್ರಕ್ಕೆ ಹೋರಾಡಿರಬಹುದು ಅಂಕಂಡರು...ಕೊನೆಗೆ ವಿವೇಕಾನಂದನ ಸಾಲು ಹೇಳಿ ನಿಲ್ಲಿಸಿದರು. ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ಯಾರು ಕೂರಬೇಡಿ ಅಂತ ಬಂದ ಜನರನ್ನೆಲ್ಲಾ ಎಬ್ಬಿಸಿದ್ದರು....ಲೇ ಯಾಕಲಾ ಈ ವಯ್ಯ ಯಲ್ಲರನ್ನ ಎಬ್ಬಿಸಿದ ಅಂದ ಕಿಸ್ನ....ಯಾರಿಗೂ ಎನೂ ಗೊತ್ತಾಗಲಿಲ್ಲ....ಸಾಸಕರು ನಿಂತೆ ಇದ್ದರು...ಸಾಸಕರು ಕಳ್ ಮಂಜನ ಕಿವಿನಲ್ಲಿ ಎನೊ ಪಿಸುಗುಟ್ಟಿದರು....ಅಮ್ಯಾಕೆ ಮಂಜ ಮೈಕ್ ತಕ್ಕಂಡು ಯಲ್ಲರಿಗೂ ಧನ್ಯವಾದ ಹೇಳಿ ಕಳುಹಿಸಿದ. ಸಾಸಕರು ಏನೂ ಹೇಳಿರಲಾ ಅಂದ ಕ್ವಾಟ್ಲೆ ಕಿಸ್ನ...

ಲೇ ಆ ಮೂದೇವಿಗೆ ಪೈಲ್ಸ್ ಖಾಯಿಲೆ ಅಂತೆ ಕನಲಾ...ಬಿಳಿ ಬಟ್ಟೆ ಬ್ಯಾರೆ ಹಾಕಿದ್ರಲ್ಲ ಅದಕ್ಕೆ ವೇದಿಕೆ ಮ್ಯಾಗೆ ಆ ವಯ್ಯನೂ ಕೂರದೆ ಜನಗಳನ್ನು ಕೂರಕೆ ಬುಡದೆ ಎಬ್ಬಿಸಿದ. ಪೈಲ್ಸ್ ಜೊತೆಗೆ ಒಂದು ಕುರ ಬ್ಯಾರೆ ಆಗೈತಂತೆ ಸ್ಯಾನೆ ನೋವು ಕನ್ಲಾ ಮಂಜ ಅಂದರು......ಏನಾರೂ ಮಾಡಿ ತಡ್ಕಳಿ ಸಾ ಅಂದೆ ಕನ್ರಲಾ ಅಂದ ಕಳ್ ಮಂಜ....

ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...

ಬುಧವಾರ, ಜನವರಿ 29, 2014

ಹಿತನುಡಿ


ಗೀಚಿದರು ಗುರುಗಳು 
ನಿನ್ನ ಕನಸು 
ನನಸಾಗಲೆಂದು...
ಶುಭ ಹಾರೈಕೆಗಳೊಂದಿಗೆ
ಮಾಯಸಂದ್ರ ವಸುಧೇಂದ್ರ ಮೂರ್ತಿ....
ಗರಮ್ ಗೊಂಡರು ಗುರುಗಳು
ಶಿಷ್ಯ ತಿದ್ದುಪಡಿ ಕೇಳಲು
ನಿನ್ನ ಸ್ವಪ್ನ 
ನನಸಾಗಲೆಂದು....
ಶುಭ ಹಾರೈಕೆಗಳೊಂದಿಗೆ
ಮಾ.ವ ಮೂರ್ತಿ....



ಶನಿವಾರ, ಜನವರಿ 25, 2014

ಗಣರಾಜ್ಯೋತ್ಸವ

ಕಳ್ ಮಂಜನಿಗೆ ಸಾಸಕರಿಂದ ಫೋನ್ ಬಂತು. ನೋಡಲಾ ಮಂಜ, ಈ ಕಿತ ಗಣರಾಜ್ಯೋತ್ಸವ ಅದ್ದೂರಿಯಾಗೆ ಮಾಡಬೇಕು. ಟಿವಿನಾಗೆ ನಮ್ಮ ತಾಲ್ಲೂಕ್ ಸುದ್ದಿ ಬರಬೇಕು. ಈ ಕಿತ MP election ಗೆ ನಿಂತ್ಕಂತಿನಿ. ಲಕ್ಸ ಖರ್ಚಾದರೂ ಪರವಾಗಿಲ್ಲ ಕನ್ಲಾ ಯಲ್ಲಾ ಸಂದಾಕಿ arrangement ಮಾಡಲಾ, ಭಾನುವಾರ ಬ್ಯಾರೆ ಜನ ಜಮಾಯಿಸಬೇಕು ಅಂದರು. ಆಯ್ತಣ್ಣೊ ಅಂತೇಳಿ ಯಲ್ಲರನ್ನು ಕರೆದು ಹೇಳಿದ.

ನೋಡ್ರಲಾ ಈ ಕಿತ ಪೆಸೆಲ್ ಇರಬೇಕು ಅಂತ ಸಾಸಕರು ಹೇಳವರೆ....ಹಂಗೆ ಮಾಡಮಾ ಕನ್ರಲಾ ಅಂದ. ಯಲ್ಲರಿಗೂ ಒಂದೊಂದು ಕೆಲಸ ವಹಿಸಿದ. ಇಸ್ಕೂಲ್ ಮುಂದೆ ಮೈದಾನದಾಗೆ ಯಲ್ಲ arrangement ಮಾಡಿದ. ಸಿದ್ಲಿಂಗುಗೆ ಫೋನ್ ಮಾಡಿ ಬೆಂಗಳೂರಿನಿಂದ ಜನರನ್ನ ಕರೆಸ್ತೀನಿ ಅಂದ.
ಸಾಸಕರಿಂದ ಕಾಸ್ ಇಸ್ಕಂಡು ಪ್ರಚಾರ ಯಲ್ಲ ಮಾಡಿಸಿದ. ಬೆಂಗಳೂರಿಗೂ ಸಹ ಹೋಗಿ ಬಂದ.


ಭಾನುವಾರ ಬಂದೆ ಬುಡ್ತು. ಜನ ಸಿಕ್ಕ ಪಟ್ಟೆ ಜಮಾಯಿಸಿದರು. ಸಾಸಕರ ಕಾರ್ ಬಂತು. ಯಲ್ಲ arrangement ನೋಡಿ ದಂಗಾದರು. ನೀವು MP ಆಯ್ತೀನಿ ಅಂದ್ರಲಾ ಸಾ ಅದಕ್ಕೆ Delhi ತರ ಪೆರೇಡ್ ಅರೆಂಜ್ ಮಾಡಿವ್ನಿ ಅಂದ ಕಳ್ ಮಂಜ. ಮೈದಾನ ದಾಗೆ uniform ಹಾಕೊಂಡು Left Right ಅಂತ ಅಂಕಂಡು ಜನ ನಿಂತಿದರು. ಐದಾರು ತರಹದ ತಂಡಗಳು. ಒಂದೊಂದು ತಂಡದಲ್ಲಿ ಸುಮಾರು ಇಪ್ಪತ್ತು ಜನ ಇದ್ದರು. 

ಕ್ಯಾಂಟರ್ ಗಾಡಿನ ಯಲ್ಲ ಕವರ್ ಮಾಡಿ ಸ್ತಬ್ಧದೃಶ್ಯ (tableau) ಮಾಡಿಸಿದ್ದ. ಇಮಾಮ್ ಸಾಬಿದು ಮಟನ್ ಸಾಗಿಸೊ ಲಗ್ಗೇಜ್ ಅಟೋ ಸಹ ಸ್ತಬ್ಧದೃಶ್ಯಕ್ಕೆ ಬಳಸಿದ್ದ. ಮೈಕ್ ಸೆಟ್ ನಲ್ಲಿ ಬರೀ ಕನ್ನಡ ಹಾಡು ಹಾಕಿಸಿದ್ದ. ಪೆರೇಡ್ ಸುರು ಆಯ್ತು. ಕ್ಯಾಂಟರ್ ಗಾಡಿಗಳು ಮುಂದೆ... ಅದರ ಹಿಂದೆ left right ಅಂತ military ಗಳ ತರನೆ ತಂಡಗಳು ಹೋದವು. ಕೈನಲ್ಲಿ plastic gun ಬ್ಯಾರೆ ಇದ್ದವು. ಸಾಸಕರು ಗೌರವ ವಂದನೆ ಸ್ವೀಕರಿಸಿದರು. ಮುಗಿತೇನಲಾ ಕೈ ನೊಯ್ತದೆ salute ಮಾಡಿ ಅಂತಿದ್ದರು. ಮೈಕಲ್ಲಿ ಮಾತ್ರ ನಾವಾಡುವ ನುಡಿಯೆ ಕನ್ನಡ ನುಡಿ ಹಾಡು ಬತ್ತ ಇತ್ತು....ಇಮಾಮ್ ಸಾಬಿ ಲಗ್ಗೇಜ್ ಅಟೋ ಅರ್ಧದಲ್ಲಿ ಮದ್ಯ ಕೆಟ್ಟು ಹೊಯ್ತು...ಅಮ್ಯಾಕೆ ತಳ್ಳಿ ಸೈಡಿಗೆ ನಿಲ್ಲಿಸಿದರು. ಸಾಸಕರು ಬಾವುಟ ಹಾರಿಸಿದರು. ಕಳ್ ಮಂಜ ಒಂದು ಗನ್ ತಕ್ಕಂಡು ಆಕಾಶಕ್ಕೆ ಮೂರು ಗುಂಡು ಹಾರಿಸಿದ. ಒಂದು bullet just miss ಆಗಿ ತೆಂಗಿನಮರಕ್ಕೆ ಬಿತ್ತು. 

ಯಲ್ಲ ಆದಮ್ಯಾಕೆ ಸಾಸಕರು ಕಳ್ ಮಂಜನಿಗೆ ಕಾಸ್ ಕೊಟ್ಟು ಹೊಳಟರು. ಮಂಜ ಯಲ್ಲರಿಗೂ ಕಾಸ್ ಹಂಚಿ ಕಳಿಸಿದ. ಸಿವಮ್ಮನ ಹೋಟೆಲ್ ತವ ಯಲ್ಲ ಜನ ಕೇಳಿರು. military ನಾ ಎಲ್ಲಿಂದ ಕರೆಸಿದ್ಯಲಾ ಅಂತ...ಆಗ ಬಾಯಿ ಬುಟ್ಟ...ಲೇ ಬಡ್ಡೆತವ...ಅವರು military ಅಲ್ಲ ಕನ್ಲಾ...ಬೆಂಗಳೂರಲ್ಲಿ security ಕೆಲಸ ಮಾಡೋರು ಕನ್ಲಾ....ಸಿದ್ಲಿಂಗು ಆಫೀಸ್ ತವ ಸುತ್ತ ಮುತ್ತ ಯಲ್ಲ security gaurd ಗಳಿಗೆಲ್ಲಾ ರಜೆ ಇತ್ತಲ್ಲ ಅದಕ್ಕೆ ಅವರನ್ನೆಲ್ಲಾ ಕರೆಸಿದ್ದೆ uniform ಹಾಕಂಡ್ plastic gun ತಕ್ಕಂಡ್ ಬನ್ನಿ ಅಂತ. ಮತ್ತೆ ನೀನು ಗುಂಡು ಹಾರಿಸಿದ್ದು ಅಂದರು....ಅದಾ ಪೊಲೀಸ್ ಟೇಸನ್ ತವ ಬಾಗಿಲಲ್ಲಿ gunman ದು ಕನ್ಲಾ.....ನೆನ್ನೆ ರಾತ್ರಿ night duty ಮಾಡೋನು ತೂಕಡಿಸುವಾಗ ಹೊಡಕೊಂಡು ಬಂದೆ ಅಂದ.

ವಿಶೇಷ ಸುದ್ದಿ ಅಂತ TV9 ನವರು ತೋರಿಸುತ್ತ ಇದ್ದರು. ಕಳ್ ಮಂಜನಿಗೆ ಸಾಸಕರ ಫೋನ್ ಬಂತು....ಲೇ ಬಡ್ಡೆತ್ತದೆ ಬಾವುಟ ಯಾವುದಲಾ ಕಟ್ಟಿದೆ....ನಮ್ಮ ದೇಸದ್ದು ಅಲ್ವೇನಲಾ ಕಟ್ಟೋದು ಅಂದರು....ಅಣ್ಣೊ ಅದು ನಮ್ಮ ದೇಶದ್ದೆ ಅಂದ ಮಂಜ.....ಲೇ ಅದು ಹಷಣ ಕೆಂಪು ಕನ್ನಡ ಬಾವುಟ ಕಟ್ಟಿದಲ್ಲೊ...TV9 ಅದೆ ತೋರಿಸಿ ರುಬ್ಬುತ ಅವರೆ ಅಂದರು ಸಾಸಕರು...

ಅಣ್ಣೊ ನೀವೆ ಹೇಳಿರಿ ಗಣ "ರಾಜ್ಯೋತ್ಸವ" ಆಚಾರಣೆ ಮಾಡಮ ಅಂತ ಅದುಕ್ಕೆ ನಾನು ಆ ಬಾವುಟ ಕಟ್ಟಿಸಿದ್ದೆ ಅಂದ.
ಥೂ ನಿನ್ನ ಮಕ್ಕೆ ಕಾದ ಯಣ್ಣೆ ಉಯ್ಯ....


ಮಂಗಳವಾರ, ನವೆಂಬರ್ 12, 2013

ರಾಜ್ಯೋತ್ಸವ

ಸಿದ್ಲಿಂಗು ಫೋನ್ ಬಂತು ಕಳ್ ಮಂಜನಿಗೆ...ಮಂಜು, ನನ್ನ ಆಫೀಸಲೊಬ್ಬ ಸೆಲ್ವ ಅಂತ ಇದ್ದಾನಲ್ಲ, ಅವರ ಊರಲ್ಲಿ ಕನ್ನಡ ರಾಜ್ಯೋತ್ಸವ ಮಾಡುತ್ತಾರಂತೆ. ಒಂದು ಕಿತ ನಮ್ಮೂರಿಗೆ ಬಂದಿದ್ದಾಗ ನಿಮ್ಮೆಲ್ಲರ ಕಾರ್ಯಕ್ರಮ ನೋಡಿ ಖುಸಿ ಆಗಿ ಈಗ ಅವರ ಊರಲ್ಲಿ ನೀವೆ ಕಾರ್ಯಕ್ರಮ ಕೊಡಬೇಕೆಂದು ಕೇಳಿದ್ದಾನೆ, ನೀವೆಲ್ಲಾ ಸೇರಿ ಏನಾರೂ ಮಾಡ್ರಲಾ ಅಂದ. ಆಯ್ತಣ್ಣೊ ಯಲ್ಲರೂ ಪ್ರಾಕ್ಟೀಸು ಮಾಡ್ತೀವಿ ಅಂತೇಳಿ ಯಲ್ಲರಿಗೂ ಹೇಳಿದ. ಈ ಕಿತ ಹೆಂಗಸರು ಸಹ ಮಾಡಲಿ ಅಂತ ಅವರು ಸಹ ಡ್ಯಾನ್ಸು, ಡೊಳ್ಳು ಕುಣಿತ, ವೀರಗಾಸೆ ಯಲ್ಲ ಪ್ರಾಕ್ಟೀಸು ಮಾಡಿರು.

ರಾಜ್ಯೋತ್ಸವ ಡೇಟ್ ಪಿಕ್ಸ್ ಆಯ್ತು. ಕಳ್ ಮಂಜನಿಗೆ ಸಿದ್ಲಿಂಗು ಪೋನ್ ಬಂತು. ಸೆಲ್ವ ಅವರ ಊರು ಮೆಟ್ಟುಪಾಳ್ಯ ಅಂತ ತಮಿಳುನಾಡಲ್ಲಿ ಕನ್ಲಾ, ಚೆನ್ನೈನಿಂದ ೬೦ ಕಿಲೋಮೀಟರ್ . ಚೆನ್ನೈಗೆ ನೀವೆ ಟಿಕೇಟ್ ತಕ್ಕಂಡು ಹೋದ್ರೆ ಅಲ್ಲಿಂದ ಅವರು ಕರೆದುಕೊಂಡು ಹೋಗ್ತಾರೆ. ಆಮ್ಯಾಕೆ ಅಲ್ಲಿ ಟಿಕೇಟ್ ದುಡ್ಡು ಯಲ್ಲಾ ಕೊಡ್ತಾರಂತೆ. ಅಲ್ಲಿ ಊಟ ತಿಂಡಿ ರೂಮು ಯಲ್ಲಾ ಅವರೆ ನೋಡಿಕೊಂತಾರೆ. ಭಾನುವಾರ ಬೆಳ್ಳಿಗೆ ಕಾರ್ಯಕ್ರಮ. ಶನಿವಾರ ಬೆಳ್ಳಿಗೆ ೮ ಘಂಟೆಗೆ ಚೆನ್ನೈ ಬಸ್ ಸ್ಟಾಂಡಿನಿಂದ ನಿಮ್ಮನ್ನು ಕರೆದುಕೊಂಡು ಹೋಗ್ತಾರೆ. ಬಿಳಿ ಬಣ್ಣದ ಟಿಟಿ ಗಾಡಿ ಬತ್ತದೆ. ನೀವೆಲ್ಲಾ ಶುಕ್ರವಾರ ರಾತ್ರಿನೇ ಹೊರಟು ಬುಡ್ರಿ ಅಂದ ಸಿದ್ಲಿಂಗು.

ಆಯ್ತಣ್ಣೊ ಅಂತ ಕಳ್ ಮಂಜ ಯಲ್ಲರಿಗೂ ಹೇಳಿದ. ಯಲ್ಲರ ಹತ್ತಿರ ನೋಡ್ರಲಾ ನಿಮ್ಮ ಕಾರ್ಯಕ್ರಮನಾ ಹೊರನಾಡಲ್ಲಿ ಮಾಡುಸ್ತ ಇದ್ದೀನಿ. ಖರ್ಚು ಸ್ಯಾನೆ ಬತ್ತದೆ. ಆಮ್ಯಾಕಿಂದ ನೀವು ಪೇಮಸ್ ಆಗ್ತೀರಾ...ಇನ್ನ ಹೆಚ್ಚು ಕಾರ್ಯಕ್ರಮ ಯಲ್ಲಾ ಸಿಗ್ತದೆ...ಈಗ ಖರ್ಚಿಗೆ ಅಂತ ನೀವೆಲ್ಲಾ ನಾಲಕು ಸಾವಿರ ಮತ್ತೆ ಡ್ರಸ್ಸಿಗೆ ಒಂದು ಸಾವಿರ ಯಲ್ಲ ಐದು ಸಾವಿರ ಆಯ್ತದೆ ಅಂತ ಹತ್ತು ಜನಗಳಿಂದ ಐವತ್ತು ಸಾವಿರ ಕಿತ್ತ. ಅದ್ರಾಗೆ ೮ ಜನ ಹೆಂಗಸರು ಇಬ್ಬರು ಗಂಡಸರು ಇದ್ದರು.

ಪಕ್ಕದೂರಲ್ಲಿ ಜಲಗೇರಮ್ಮನ ದೇವಸ್ಥಾನ ಇತ್ತು. ಅಲ್ಲಿ ಹೋಗಿ ಪೂಜಾರಿಗೆ ಐನೂರು ರೂಪಾಯಿ ಕೊಟ್ಟು ಭಕ್ತಾದಿಗಳು ಅಮ್ಮನವರಿಗೆ ಉಡಿಸುವ ಸೀರೆ ಗಳಲ್ಲಿ ಒಂದೆ ತರಹದ ಏಂಟು ಹರಿಶಿಣ ಬಣ್ಣದ ಕೆಂಪು ಬಾರ್ಡರ್ ಸೀರೆ ತಕ್ಕಂಡು ಬಂದ. ಗಂಡಸರಿಗೆ ಒಂದೊಂದು ಹಳದಿ ಜುಬ್ಬ ಕೆಂಪು ಪೈಜಾಮ ತಂದು ಯಲ್ಲರಿಗೂ ಕೊಟ್ಟ. ಯಲ್ಲ ಸೇರಿ ಒಂದು ಸಾವಿರ ಆಯ್ತು. ಶುಕ್ರವಾರ ಯಲ್ಲರನ್ನು ಅದೇ ಡ್ರಸ್ ನಲ್ಲಿ ಬರಬೇಕು ಅಂತ ಹೇಳಿದ್ದ. ಯಲ್ಲರೂ ಬಸ್ ಹತ್ತಿದರು. ನಾವೆಲ್ಲಾ ಕರ್ನಾಟಕ ರಕ್ಷಣ ವೇದಿಕೆಯವರು ಚಳುವಳಿಗೆ ಹೊಂಟಿದ್ದೀವಿ ಅಂತೇಳಿ ಬಡ್ಡಿಮಗ ಬಸ್ಸಿನಲ್ಲೂ ಟಿಕೇಟ್ ತೆಗೆದುಕೊಳ್ಳಲಿಲ್ಲ.


ಹೆಂಗೊ ಬೆಳ್ಳಿಗೆ ಏಳು ಘಂಟೆಗೆ ಚೆನ್ನೈ ತಲುಪಿರು. ಯಲ್ಲರೂ ಅಣ್ಣ ಹೊಟ್ಟೆ ಹಸಿವು ಅಂದರು. ತಡೀರಲಾ ಕಾರ್ಯಕರ್ತರು ಬತ್ತಾರೆ ಅಂತ ತಿಂಡಿನೂ ಕೊಡಿಸಲಿಲ್ಲ. ಅಮ್ಯಾಕೆ ಅವರೆ ಒಂದೊಂದು ದ್ವಾಸೆ ತಿಂದು ಕಳ್ ಮಂಜನಿಗೂ ಒಂದು ದ್ವಾಸೆ ಕೊಡಿಸಿದ್ರು. ಅಣ್ಣೊ ವಿಸರ್ಜನೆ ಅಂದ್ರು...ಕೈನಲ್ಲಿ ಕಲ್ಲು ಹಿಡಿದುಕೊಂಡ್ರೆ ತಡೆದುಕೊಳ್ಳಬಹುದು ಅಂತ ಐಡಿಯಾ ಬ್ಯಾರೆ ಕೊಟ್ಟ. ಕೊನೆಗೂ ಏಂಟಾಯಿತು. ಇವರಿಗೆ ತಮಿಳು ಭಾಸೆ ಬ್ಯಾರೆ ಬರಕ್ಕಿಲ್ಲ. ಒಂದು ಬಿಳಿ ಟಿಟಿ ಗಾಡಿ ಸ್ಲೋ ಮಾಡಿದ. ಇವರನ್ನೆ ನೋಡ್ತಾ ಇದ್ದ ಹೆಂಗೆ ಪೊಣೊ ಅಂದ... ಪೋಗ್ರಾಮ್, ಪೋಗ್ರಾಮ್ ಅಂದ. ವಾಂಗೊ ಅಂತ ಗಾಡಿಗೆ ಹತ್ತಿಸಿಕೊಂಡ ಯಲ್ಡು ಘಂಟೆ ಆದಮ್ಯಾಕೆ ಇಳಿಸಿದ.

ಇಳಿದು ನೋಡುತ್ತಾರೆ. ದೊಡ್ಡ ದೇವಸ್ಥಾನ. ಎಲ್ಲ ಹಷಣ ಸೀರೆ ಉಟ್ಕೊಂಡಿರೊ ಜನ ಸುತ್ತ ಮುತ್ತ... ಐದು ಸಾವಿರ ರೂಪಾಯಿ ಕೇಳಿದ ಡ್ರೈವರ್. ಮಂಜ ಕೊಡಕಿಲ್ಲ ಅಂತ ಕ್ಯಾತೆ ತೆಗೆದ. ಹೆಂಗಸರೆಲ್ಲಾ ಹಳದಿ ಸೀರೆ ಗಂಡಸರು ಹಳದಿ ಜುಬ್ಬನಲ್ಲಿ ಇದ್ದಿದಕ್ಕೆ ಡ್ರೈವರ್ ಓಂ ಸಕ್ತಿ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದ. ಕೊನೆಗೆ ಮಾತಾಡೊಕೆ ಭಾಸೆ ಬರದೆ ಮಂಜ ದುಡ್ಡು ಕೊಟ್ಟ. ಬೋರ್ಡು ಓದೋಣ ಅಂದ್ರೆ ಯಲ್ಲ ಕಡೆ ಜಿಲೀಬಿ ಅಕ್ಷರ. ಕೊನೆಗೆ ಸಿದ್ಲಿಂಗುಗೆ ಫೋನ್ ಮಾಡಿ ಮೆಟ್ಟುಪಾಳ್ಯ ತಲುಪಿ ಕಾರ್ಯಕ್ರಮ ಮಾಡಿರು. ಊರಿಗೆ ಬತ್ತಿದ್ದಂಗೆ ಯಲ್ಲರೂ ಕಳ್ ಮಂಜನ್ನ ನಂಬಿ ಮೆಟ್ಟುಪಾಳ್ಯಕ್ಕೆ ಹೋದವಲ್ಲ ನಾವು ಮೆಟ್ ನಾಗೆ ಹೊಡ್ಕೊಬೇಕು ಅಂತ ಅವನಿಗೆ ನಾಲಕ್ಕು ಇಕ್ಕಿ ಮಿಕ್ಕ ಕಾಸ್ ಕಿತ್ಕೊಂಡರು

ಬುಧವಾರ, ಅಕ್ಟೋಬರ್ 02, 2013

ಗಾಂಧಿ ವಿಸೇಸ



ಕಳ್ ಮಂಜ, ಕ್ವಾಟ್ಲೆ ಕಿಸ್ನ, ಯಂಕ್ಟ ಯಲ್ಲಾ ಸಿವಮ್ಮನ ಹೋಟೆಲ್ನಾಗೆ ವಡೆ ತಿಂಕಂಡು ಕುಂತಿದ್ರು. ...ಮಂಜಣ್ಣ, ನಾಳಿಕ್ಕೆ ಗಾಂಧಿ ಜಯಂತಿ ಐತೆ ಅಂತು  ಸಿವಮ್ಮ ಕ್ಯಾಲೆಂಡ್ರು ನೋಡಿ .......ಓ ನಾಳೆನೇನಾ, ಮರೆತೆ ಹೋಗಿತ್ತು ಕನ್ಲಾ ಅಂದ ಕಿಸ್ನ...ಎನೂ ತಯಾರಿನೆ ಮಾಡಿಲ್ವಲ್ಲ ಅಂದ ಮಂಜ....

ಯಾರಿಗಾದ್ರೂ ಗಾಂಧಿ ವೇಸ ಹಾಕಿಸಬೇಕು ಕನ್ಲಾ.....

ನಾನಂತೂ ಹಾಕಲಪ್ಪ....ಮಗಂದು ಹೋದ ಕಿತ ಗಾಂಧಿ ಪಾಲ್ಟು ಹಾಕಿ ಬಗ್ಕೊಂಡು ನೆಡೆದು ಮೂರು ದಿನ ಸೊಂಟ ಹಿಡಕಂಡಿತ್ತು ಅಂದ ಯಂಕ್ಟ.....

ಸರಿ ಬ್ಯಾಡ ಬುಡ್ಲ ಮಾಡೊದು ಅಂದ ಕಿಸ್ನ...ಸಿವಮ್ಮನಿಗೆ ಬಿಗ್ನೆಸ್ ಹೋಯ್ತದೆ ಅಂತ ಗಾಂಧಿ ಪಾಲ್ಟ್ ಬಗ್ಗೆ ಯೋಸ್ನೆ ಮಾಡಬೇಡ ಕನ್ಲಾ ಮಂಜ...ನನ್ನ ತಂಗಿ ಕೆಂಪಮ್ಮ ಬಂದವಳೇ ಊರಿಂದ...ಅವಳು ಮಾಡ್ತಾಳೆ ಅಂತು.....ಕೆಂಪಮ್ಮ ಹ್ಯೆಂಗೆ ಮಾಡಾಳು ಗಾಂಧಿ ಪಾಲ್ಟು... ಅದೆಲ್ಲಾ ಆಗಕಿಲ್ಲ ಅಂದ ಕಿಸ್ನ......ಹೇ ಮಾಡಲಿ ಬುಡ್ಲಾ...ಸಕ್ಕತ್ ಜನ ಜಮಾಯಿಸ್ತಾರೆ ಅಂದ ಕಳ್ ಮಂಜ.......

ಹೇ ಅವರೂರು ಹೀರೆಗೌಡನದೊಡ್ಡಿನಾಗೆ ಒಂದು ಕಿತ ಗಾಂಧಿ ಪಾಲ್ಟು ಹಾಕಿತ್ತು ಕೆಂಪಿ ಅಂತು ಸಿವಮ್ಮ.......

ಸರಿ ಈಗ ಟೇಮ್ ಇಲ್ಲ..ನಾಳೆ ಬೆಳ್ಳಿಗೆ ಗಾಂಧಿ ವೇಸ ಹಾಕಿಸು.....ಇಸ್ಕೂಲ್ ತವನೇ ಮಾಡಮ.....ಹೋದ ಕಿತ ತರ ಯಾವುದು ಯಡವಟ್ ಆಗಬಾರದು ಕನ್ಲಾ....ಕಾಂಗ್ರೆಸ್ ಬಾವುಟ ತರಬ್ಯಾಡ ಕನ್ಲಾ....ರಾಸ್ಟ್ರ ಧ್ವಜ ತಕ್ಕಂಡ್ ಬಾ ಅಂದ ಮಂಜ.... ಮಂಜ ಸಾಸಕರಿಗೆ ಪೋನ್ ಮಾಡಿದ...ಆಯ್ತು ಮಾಡ್ರಲಾ...ಖರ್ಚು ಎನಾತದೊ ನಾ ಕೊಡ್ತೀನಿ.....ಪೊಲೀಸು, ಪೋಟೊ, ವಿಡಿಯೊ, ಟಿವಿ ನವರಿಗೂ ಹೇಳ್ತೀನಿ ಅಂದ್ರು....ಟ್ಯಾಂಕ್ಸಣ್ಣೊ ಅಂದ ಮಂಜ....

ನಾನು ಜುಲೋಬಿ ಬೂಂದಿ ಮಾಡಲಾ ಅಂತು ಸಿವಮ್ಮ...ಆತು ಮಾಡು ಸಾಸಕ್ರು ಕಾಸ್ ಕೊಡ್ತಾರೆ ಅಂದ ಮಂಜ....ತಮಟೆಗೆಲ್ಲಾ ಹೇಳಲಾ.....ಸ್ಕೂಲ್ ಐಕಳು ಹೆಂಗಿದ್ರೂ ಬತ್ತಾರೆ ....

ಮಾರನೆ ದಿನ ತಮಟೆ ಸದ್ದಿಗೆ ಜನ ಯಲ್ಲಾ ಜಮಾಯಿಸಿರು.....ತಮಟೆಯವನು ಬ್ಯಾರೆ ಗಾಂಧಿ ವೇಸದಾಗೆ ಕೆಂಪಮ್ಮ ಬತ್ತಾರೆ ಅಂತಿದ್ದ...........

ಕೆಂಪಮ್ಮ ಬೆಳ್ಳಿಗೆನೆ ಮೇಕಪ್ ಯಲ್ಲಾ ಮಾಡ್ಕಂಡು ರೆಡಿ ಆಗಿತ್ತು...ಗಾಂಧಿನಾ ಇಸ್ಕೂಲ್ ತಕ್ಕೆ ಕರೆದುಕೊಂಡು ಬರೋಕೆ ಅಂತ ಮಾಂಸದ ಅಂಗಡಿ ಇಮಾಮ್ ಸಾಬಿದು ಲಗ್ಗೇಜ್ ಆಟೋ ಕಳಿಸಿದ್ದ......ಗಾಂಧಿ ಜಯಂತಿ ದಿನ ಮಾಂಸ ಮಾರೊಂಗಿಲ್ಲ ಅಂತ ಮಾಂಸನಾ ಆಟೋ ಒಳಗೆನೇ ಮಡಗಿದ್ದ ಇಮಾಮ್ ಸಾಬಿ...ವಸಿ ಅಜೆಸ್ಟ್ ಮಾಡ್ಕಂಡ್ ಕೂತ್ಕಳಮ್ಮ ಅಂದ ಡ್ರೇವರ್ ಪಾಶ....ಕೆಂಪಮ್ಮ ಆಟೋ ಅತ್ತಿ ಬತ್ತು ಇಸ್ಕೂಲ್ ತಕ್ಕೆ.....

ಸಾಸಕರು ಬಾವುಟ ಹಾರಿಸಿ ರಘುಪತಿ ರಾಘವ ರಾಜಾ ರಾಮ್ ಹೇಳ್ತಾ ಇದ್ರು....ಮಗಂದು ಆಟೋ ಬಂತು...ಗಾಂಧಿ ಇಳಿತಿದ್ದಂಗೆ ಜನ ರಘುಪತಿನಾ ಅರ್ಧಕ್ಕೆ ನಿಲ್ಸಿ ಆಟೋ ಸುತ್ತ ತುಂಬಿಕೊಂಡ್ರು....ಟಿವಿನವರು ಕ್ಯಾಮರಾ ತಕ್ಕಂಡ್ರು.......ಗಾಂಧಿ ವೇಸ ನೋಡಿ ಹೆಂಗಸರು ಸಹ ಸಿಳ್ಳೆ ಹೊಡಿತಾ ಇದ್ದರು. ಹಂಗೆ ಸ್ಟೇಜ್ ಮ್ಯಾಕೆ ಬಂತು....
ಸಾಸಕರು ಇದೇನಲಾ ಹೊಸ ಗಾಂಧಿ ಅಂದ್ರು.......ನೋಡಿರೆ ಕೆಂಪಮ್ಮ ಬಂದಿದ್ದು ಇಂದಿರಾ ಗಾಂಧಿ ವೇಸ ಹಾಕ್ಕಂಡು....ಕಳ್ ಮಂಜ ಹಂಗೆ ದೂರ ಯಸ್ಕೇಪ್.....ಸಿವಮ್ಮನ ಕೇಳಿರೆ ನೀವು ಗಾಂಧಿ ಅಂದ್ರಿ ...ಯಾವ ಗಾಂಧಿ ಅಂತ ಹೇಳಿದ್ರಾ ಅಂತು.....

ಆರು ತಿಂಗಳ ಹಿಂದೆ ಹರಕೆ ಅಂತ ನಂಜನಗೂಡಲ್ಲಿ ಬ್ಯಾರೆ ಮುಡಿ ಕೊಟ್ಟು ಈಗ ಇಂದಿರಾ ಗಾಂಧಿಯಷ್ಟೆ ಕೂದಲು ಇತ್ತು ಕೆಂಪಮ್ಮನಿಗೆ....ಅದ್ಕೆ ವಸಿ ಸೈಡಲ್ಲಿ ದ್ವಾಸೆ ಹಿಟ್ಟು ಬಳಿದು ಸೇಮ್ ಇಂದಿರಾ ಗಾಂಧಿ ತರ ಸೀರೆ ಉಡ್ಕಂಡಿ ಬಂದಿತ್ತು.....
ಲೇ ಮುಂದಿನ ಕಿತ ವನಜಾಕ್ಸಿಗೆ ಸೋನಿಯಾ ವೇಸ ಹಾಕಿಸ್ಲಾ ಅಂದ ಯಂಕ್ಟ...ಏ ಥೂ ಅವಳ ಮಕ್ಕೆ.....




ಸೋಮವಾರ, ಸೆಪ್ಟೆಂಬರ್ 30, 2013

ಕಳ್ ಮಂಜ ಹಾಳ್ಡ್ ವೇರ್


ಕಳ್ ಮಂಜ ಮದುವೆ ಆಗೋಕೆ ಹೆಣ್ಣು ಹುಡುಕ್ತಾ ಇದ್ದ......ಯಲ್ಲರ ಹತ್ತಿರ ಹೇಳಿದ್ದ... ಯಾವುದಾದ್ರು ಹುಡುಗಿ ಇದ್ರೆ ಹೇಳಿ ಅಂತ...ಒಂದು ಸಲ ಯಂಕ್ಟನ ಸೋದರಮಾವ ಭೀಮಪ್ಪ ಊರಿಗೆ ಬಂದಾಗ ಅವರಿಗೂ ಹೇಳಿದ...
ಚುಂಚುನಕುಪ್ಪೆನಾಗೆ ಒಂದು ಒಳ್ಳೆ ಸಂಬಂಧ ಐತೆ ...ಆದ್ರೆ ಹುಡುಗ ಸಾಪ್ಟ್ ವೇರು ಇಲ್ಲ ಹಾಲ್ಡ್ ವೇರು ಬೇಕಾಂತರೆ ಅಂದ್ರು ಭೀಮಪ್ಪ...ನಾನು ಹಾಲ್ಡ್ ವೇರ್ ಪೀಲ್ಡ್ ನಾಗೆ ಇರೋದು ಅಂತೇಳಿ ಅಂದ ಮಂಜ...ಸರಿ ಅಂತ ಹುಡುಗಿ ಮನೆಗೆ ಪೋನ್ ಮಾಡಿ ಹೇಳಿರು ಭೀಮಪ್ಪ....ಅವರು ಸಹ ಕರೆದುಕೊಂಡ್ ಬನ್ನಿ ಅಂದ್ರು....
ಒಂದು ಟಿಟಿ ಗಾಡಿ ಮಾಡ್ಕಂಡು ಹನ್ನೆಳ್ಡು ಜನ ಹೊಳಟ್ರು...ಕಳ್ ಮಂಜ ಸಿದ್ಲಿಂಗು ತವ ಕಂಪ್ಯೂಟ್ರು, ಸಾಪ್ಟ್ ವೇರು, ಹಾಲ್ಡ್ ವೇರು ಯಲ್ಲ ವಸಿ ತಿಳ್ಕಂಡಿದ್ದ...ಕಿಸ್ನ, ಯಂಕ್ಟ ಯಲ್ಲ ಬಡ್ಡಿ ಹೈದ್ನೆ ಯಾವಾಗ್ಲಾ ಕಲಿತೆ ಹಾಳ್ಡ್ ವೇರು ಅನ್ನೋರು.....ಅವರಿಗೂ ಅದೇನು ಅಂತ ಗೊತ್ತಿರಲಿಲ್ಲ...
ಚುಂಚುನಕುಪ್ಪೆಗೆ ಹೋಗ್ತಾ ಇದ್ದಂಗೆ ಜೂಸು ತಿಂಡಿ ಯಲ್ಲ ಕೊಟ್ಟರು....ಯಂಕ್ಟ ಕಿಸ್ನ ಯಲ್ಲ ಸಕ್ಕತಾಗಿ ತಿಂದ್ರು...ಎನ್ಲಾ ಬರೀ ಹೆಣ್ಣು ನೋಡೋಕ್ ಬಂದಾಗಲೇ ಈ ಪಾಟಿ ಐಟಮ್ಸ್ ಮಡಗವರಲ್ಲ ಇನ್ನ ಮದ್ವೆಗೆ ಏನೇನ್ ಮಾಡ್ಸಾರು.....ಗೋಬಿ, ಚಿಪ್ಸ್, ಪಕೋಡ, ಸಮೋಸ, ಸಾವಿಗೆ ಬಾತು, ಮೈಸೂರ್ ಪಾಕು, ಜುಲೇಬಿ, ರಸ್ನ, ಬಾಳೆಹಣ್ಣು ಯಲ್ಲ ಇತ್ತು...ಒಳ್ಳೆ ಕುಳನೇ ತೋರಿಸಿದ್ದೀಯಾ ಕನ್ಲಾ ಅಂದ ಕಿಸ್ನ.....
ಹುಡುಗಿನಾ ನೋಡಿ ಆತು...ಹುಡುಗಿ ಅಪ್ಪ ಮಂಜನ್ನ ಕೇಳಿರು...ಏನ್ ಕೆಲಸ ಅಂತ....ನನದೂ ಹಾಲ್ಡ್ ವೇರ್ ಪೀಲ್ಡು ಅಂದ...
ಸರಿ ಹುಡುಗಿ ಕೇಳುದ್ಲು...ನಿಮ್ಮ ಹತ್ರ ಗ್ರೀನ್ ಕಾರ್ಡ್ ಇದ್ಯಾ.....ಓ ಐತೆ...ಹಸಿರು ಕಾಲ್ಡ್ ಅಲ್ವ....ನಮ್ಮವ್ವನೇ ಮಾಡಿಸವಳೆ ಅಂದ ಮಂಜ....ಹುಡುಗಿಗೂ ಗ್ರೀನ್ ಕಾರ್ಡ್ ಅಂದ್ರೇನು ಅಂತ ಗೊತ್ತಿರಲಿಲ್ಲ. ಸುಮ್ನೆ ಅಮೇರಿಕಾಗೆ ಹೋಗೋಕೆ ಅದು ಬೇಕು ಅಂತ ಅಷ್ಟು ಗೊತ್ತಿತ್ತು....
ಅಷ್ಟಕ್ಕೆ ಸುಮ್ನೆ ಇರದೆ ಹಸ್ರು ಕಾಲ್ಡಿಗೆ ಸಕ್ಕರೆನೇ ಕೊಡಕಿಲ್ಲ ನಮ್ಮೂರಾಗೆ ಅಂದ...ಆಗ ಯಾಕೊ ಡೌಟ್ ಹೊಡಿತು ಅವರಿಗೆ....ಸರಿ ನಾವು ಆಮ್ಯಾಕೆ ಹೇಳ್ತೀವಿ ಅಂತ ಕಳಿಸಿಕೊಟ್ರು....ಆಮ್ಯಾಕೆ ಭೀಮಪ್ಪನ ತವ ಕೇಳಿರು ಮಂಜನ ಕೆಲಸ ಏಲ್ಲಿ ಕೇಳಿ ಅಂತ...ಆಗ ಕೇಳಿದ್ಕೆ ಬಾಯಿಬುಟ್ಟ ಮಂಜ ...
ಟೌನ್ ನಾಗೆ ಕರಿಮುಲ್ಲಾ ಸಾಬಿ ಹಾರ್ಡ್ ವೇರ್ ಅಂಗಡಿನಾಗೆ ನಟ್ಟು ಬೋಲ್ಟು ತೂಕ ಹಾಕೊ ಕೆಲಸ....ಅದುನೂ ಹಾರ್ಡ್ ವೇರ್ ಪೀಲ್ಡು ......
ಥೂ ನಿನ್ ಬಾಯ್ಗೆ ನಟ್ಟು ಬೋಲ್ಟ್ ಇಕ್ಕ.....

ಮಂಗಳವಾರ, ಆಗಸ್ಟ್ 27, 2013

ಕೃಷ್ಣ ಜನ್ಮಾಷ್ಟಮಿ


ಶ್ರೀ ಕೃಷ್ಣ ಪರಮಾತ್ಮನನ್ನು ಕ್ಷಮೆ ಯಾಚಿಸುತ್ತ )

ನೋಡ್ರಲಾ ಇನ್ನ ಮ್ಯಾಕೆ ನಾವು ಬರೀ ಗಣೇಸನ ಹಬ್ಬ ಮಾತ್ರ ಮಾಡೋದಲ್ಲ.....ಯಲ್ಲಾ ಹಬ್ಬನೂ ಆಚಾರಣೆ ಮಾಡಮ ಅಂದ ಕಳ್ ಮಂಜ.....ಯಲಾರೂ ಆಯ್ತಪ್ಪ ಅಂದ್ರು....ಯಾವುದ್ಲಾ ನೆಕ್ಸಟು ಹಬ್ಬ ಅಂದ ಕ್ಯಾತೆ ರಾಮ....ಗೋಕುಲಸ್ಟಮಿ ಕನ್ಲಾ.... ಇದ್ಯಾವುದಲಾ ಹೊಸ ಹಬ್ಬ ನಾ ಕ್ಯೊಳೆ ಇಲ್ಲ....

ಏ ಇದು ಕಿಸ್ನ ಹುಟ್ಟಿದ ದಿನ ಕಣಲಾ... ಈ ಗಾಂಧಿ ಜಯಂತಿಬಸವ ಜಯಂತಿಅಂಬೇಡ್ಕರ್ ಜಯಂತಿ ಇಲ್ವ ಹಂಗೆ.....ನಮ್ಮ ಕ್ವಾಟ್ಲೆ ಕಿಸ್ನನದಾ....ಏ ಥೂ.. ಅವನಲ್ಲ ಕನ್ಲಾ...ಶ್ರೀ ಕೃಷ್ಣ ಪರಮಾತ್ಮನದು....

ಸರಿ ಬುದ್ವಾರ ಗಣೇಸನ ಗುಡಿ ತವನೇ ಮಾಡಣ ಈ ಕಿತ.....ಡೆಕೊರೇಸನ್ ಯಲ್ಲಾ ಕಳ್ ಮಂಜ ವಹಿಸಿಕೊಂಡ....ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಕ್ಯಾತೆ ರಾಮನ ಕಡೆಯಿಂದ ಅಂತ ಆತು....

ಬುದ್ವಾರ ಬೆಳ್ಳಿಗೆ ಬಂತು... ಗೌಡ್ರು ಸ್ಯಾನೆ ಸಿಟ್ಟು ಮಾಡ್ಕೊಂಡು ಕೈನಾಗೆ ಮಚ್ಚು ತಕ್ಕಂಡು ಎಲ್ಲಿ ಆ ಕಿಸ್ನ ಅಂತ ಕಿರಚಾಡಿಕೊಂಡು ಗುಡಿತಕ್ಕೆ ಬತ್ತ ಇದ್ದ.....ಯಲ್ರಿಗೂ ಆಸ್ಚರ್ಯ....ಸಿವಮ್ಮನ ಹೋಟೆಲ್ ತವ ಕುಂತಿದ್ದ ಜನ ಎಲ್ಲಾ ಇವನಿಗೇನ್ಲಾ ಬತು ದೊಡ್ಡರೋಗ...ಅಲ್ಲಿ ನೋಡಿರೆ ಕಿಸ್ನನ ಹಬ್ಬ ಮಾಡ್ತಾವ್ರೆ...ಇವನು ಕಿಸ್ನನ ಬೈಕೊಂಡು ಓಡ್ತಾವನೆ ಅಂತಿದ್ರು.....ಸಿವಮ್ಮ ಥೂ ಆ ಗೌಡನ ಕೈ ಸೇದೋಗ ಅಂತ ಸಾಪನೂ ಹಾಕಿಲು....

ಗುಡಿ ತವ ಬಂದು ಎಲ್ಲಿ ಆ ಬಡೆತ್ತದು ಅಂತಿದ್ದ ಗೌಡ....ಎಲ್ಲರೂ ಸಮಾಧಾನ ಮಾಡಿರು. "ಏನಾತು ಗೌಡ್ರೆ" ಅಂದ ಬುಲ್ಡೆ ಬಸವ.....ಎನ್ಲಾ ಇದು ಬೋಲ್ಡುನೋಡಲಾ ಅಂದ...ನೋಡಿರೆ ಕಳ್ ಮಂಜ "ಕಿಸ್ನ ಜಯಂತಿ" ಅಂತ ಗುಡಿ ಬಾಗಿಲ ತವ ದೊಡ್ಡದಾಗಿ ಹೂವಿನ ಆರ್ಚ್ ಮಾಡಿ ಹಾಕಿದ್ದ....

ಆಮ್ಯಾಕೆ ಮಾಲಿಂಗ ಬಿಡ್ಸಿ ಹೇಳಿದ....ಇದು ಕೃಷ್ಣ  ಜನ್ಮಾಷ್ಟಮಿ ಗೌಡ್ರೆ ಅಂತ....ಓ ಹಂಗ......ಯಾವನೋ ಬಡ್ಡಿ ಮಗ ಬೆಳ್ಳಿಗೆ ಮನೆ ತವ ಬಂದು... ಗೌಡ್ರೆ ನಿಮ್ಮ ಮಗಳು ಜಯಂತಿಗೂ ಆ ಕಿಸ್ನನಿಗೂ ಮದ್ವೆ ಅಂತೆ...ಬೋಲ್ಡ್ ಹಾಕವ್ರೆ ಗುಡಿ ತವ ಅಂದ....ಅದ್ಕೆ ಓಡೋಡ್ ಬಂದೆ...ಅಂದ ಗೌಡ.

ಆ ಕಳ್ ಮಂಜನೆಯಾ ಹಾಕಿದ್ದು
ನೀವೆ ಹೇಳುದ್ರಿ ಗಾಂಧಿ ಜಯಂತಿಬಸವ ಜಯಂತಿಅಂಬೇಡ್ಕರ್ ಜಯಂತಿ ತರನೇ ಕಿಸ್ನ ಹುಟ್ಟಿದ ದಿನ ಅಂತ ಅದುಕ್ಕೆ ಹಾಕಿದೆ.... ಅಂದ ಕಳ್ ಮಂಜ
ಥೂ ನಿನ್ನ ಮಕ್ಕೆ.......

ಇನ್ನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹೆಂಗಾತು ಅಂತ ನಾಳೆ ಹೇಳ್ತೀನಿ....
ಕೃಷ್ಣ  ಜನ್ಮಾಷ್ಟಮಿಯ ಶುಭಾಶಯಗಳು.


ಭಾನುವಾರ, ಜೂನ್ 16, 2013

ಆಶ್ವಾಸನೆ


ಪ್ರಳಯವಾದರೂ
ಕೈ ಬಿಡುವುದಿಲ್ಲವೆಂದು
ಮಂತ್ರಿಗಳು ಕೊಟ್ಟರು
ಆಶ್ವಾಸನೆ....
ಪ್ರಣಯಕ್ಕೂ
ಮುನ್ನವೇ
ಕೈ ಬಿಡಲು ಕಾರಣ
ಆಶಾ ವಾಸನೆ....


ಬುಧವಾರ, ಏಪ್ರಿಲ್ 24, 2013

ಪ್ರದರ್ಶನ



ಬಳಸುವುದು ಹೇಗೆಂದು     
ತೋರಿಸಿದರು ಮಂತ್ರಿಗಳು
ಉದ್ಘಾಟಿಸಿ
ಸಾರ್ವಜನಿಕ ಗ್ರಂಥಾಲಯ....
ಮಾಧ್ಯಮಗಳಿಗೆ ಕುತೂಹಲ
ನೋಡಲು ಹೇಗೆ
ಉದ್ಘಾಟಿಸುವರೋ
ಸಾರ್ವಜನಿಕ ಶೌಚಾಲಯ....


ಸೋಮವಾರ, ಏಪ್ರಿಲ್ 22, 2013

ಶಿಬಿರ



ರಕ್ತ ದಾನ
ಮಾಡಿ ಉದ್ಘಾಟಿಸಿದರು
ಮಂತ್ರಿಗಳು 
ರಕ್ತ ಶಿಬಿರವನ್ನ...
ಕುಟುಂಬ ಯೋಜನೆ 
ಶಿಬಿರ ಉದ್ಘಾಟನೆಗೆ 
ಕಳುಹಿಸಿದರು
ತಮ್ಮ ಶ್ರೀಮತಿಯನ್ನ........



ಭಾನುವಾರ, ಡಿಸೆಂಬರ್ 16, 2012

ನನ(ನ್ನ) ಗಲ್ಲ


ಕೋಪವೇಕೆ ನಲ್ಲೆ....?
ನೀನೆ ಕೇಳಿದೆ
ನಿನಗೆ ಬೇಕಾ..? ಎಂದು
ನನಗಲ್ಲ....!!!
ಈ ಮಗುವಿಗೆಂದು
ಹೇಳದೆಯೇ
ತೋರಿಸಿದೆ
ನನ್ನ ಗಲ್ಲ.......!!!! :)

ಸೋಮವಾರ, ನವೆಂಬರ್ 19, 2012

ಅ(ಭ)ಯ




ಹೆದರಲಿಲ್ಲ ನೀನು
ಆಗುವುದೆಂದು ಪ್ರಳಯ...

ನಡುಗುವುದೇಕಿಂದು
ಆಯಿತೆಂದು ಪ್ರಣಯ....

ಆ ಭಯ ಓಡಿಸುವೆನೆಂದು
ಕೊಡುವೆ ನಿನಗೆ ಅಭಯ.....

ಕೈ ಬಿಡುವೆನೆಂದು
ಬೇಡ ನಿನ್ನಲ್ಲಿ ಸಂಶಯ....

ಮತ್ತೆಂದೂ ಬಾರದು 
ನಮಗೆ ಈ ಪ್ರಾಯ....



ಶುಕ್ರವಾರ, ಅಕ್ಟೋಬರ್ 19, 2012

ಬಲ



ನನ್ನ ವರಿಸುವ 
ನಿನ್ನ ಹಂಬಲ....

ಅದಕ್ಕಿಲ್ಲವೆಂದು
ನಿನ್ನಪ್ಪನ ಬೆಂಬಲ...

ಆಗಿದೆಯಾ ನಿನ್ನ
ಮನ ಗೊಂದಲ...

ಚಿಂತಿಸದಿರು ನಲ್ಲೆ
ನಮ್ ಪ್ರೀತಿಗೆ ನೂರಾನೆ ಬಲ....




ಬುಧವಾರ, ಸೆಪ್ಟೆಂಬರ್ 05, 2012

ನುಂಗಲಾರದ ತುತ್ತು





ನನ್ನ ಅಮ್ಮ ಇದ್ದಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಮನದಲ್ಲೆ ಆ ದೇವರನ್ನು ಶಪಿಸುತ್ತಿದ್ದೆ. ಅಮ್ಮ ಹೇಗಿದ್ದಳು ಎಂದು ಕಲ್ಪಿಸಲು ಸಹ ಆಗುತ್ತಿಲ್ಲ. ಅಮ್ಮ ಅಂತ ನಾನು ಅವಳನ್ನು ಕರೆಯುವ ಮೊದಲೆ ಅವಳು ಈ ಲೋಕ ತ್ಯಜಿಸಿದ್ದಳು. ಅಪ್ಪ ಅಣ್ಣನೊಂದಿಗೆ ನನ್ನನ್ನು ಸಹ ನೋಡಿಕೊಳ್ಳಲೆಂದು ಮಲತಾಯಿಯನ್ನು ತಂದಿದ್ದರು. ನಾನು ಅವಳನ್ನು ಅಮ್ಮ ಅಂತ ಅಂದುಕೊಂಡಿದ್ದರೂ ಅವಳಿಗ್ಯಾಕೊ ನಾನು ಮಗಳು ಅಂತ ಅನ್ನಿಸಲೇ ಇಲ್ಲ. ಕುಣಿಗಲ್ ತಾಲೂಕು ಮಾದೆಗೌಡನದೊಡ್ಡಿ ಅನ್ನೋ ಸಣ್ಣಗ್ರಾಮದಲ್ಲಿ ಎಳನೇ ತರಗತಿ ಮುಗಿಸಿದರೂ ಮುಂದೆ ಓದಲು ನಮ್ಮೂರಲ್ಲಿ ಪ್ರೌಢ ಶಾಲೆ ಇರಲಿಲ್ಲ. ಅಪ್ಪ ಬಡರೈತನಾಗಿದ್ದರೂ ಮಗಳು ಇನ್ನಷ್ಟು ಓದಲಿ ಅಂತ ೪ ಕಿಲೋಮೀಟರ್ ದೂರದ ಸಂಪಿಗೆಹಳ್ಳಿಗೆ ಸೇರಿಸಿದ್ದರಿಂದ ನಾನು ಅಣ್ಣ ಒಟ್ಟಿಗೆ ಹೋಗುತ್ತಿದ್ದೆವು. ಬೇಲಿ ದಾಟಿ ಬಂಡೆ ಹತ್ತಿ ಕಲ್ಲು ಮುಳ್ಳಿನ ದಾರಿಯಾಗಿದ್ದರೂ ಹೆಂಗೊ ಎಂಟನೆ ಕ್ಲಾಸ್ ಮುಗಿಸಿದೆ. ಅಣ್ಣ ಹತ್ತನೇ ಕ್ಲಾಸ್ ಪಾಸ್ ಮಾಡಿ ಇನ್ನು ಓದಬೇಕೆಂದನು. ನನ್ನ ಚಿಕ್ಕಮ್ಮನಿಗೆ ನಮ್ಮನ್ನು ಓದಿಸಲು ಇಷ್ಟವಿಲ್ಲದೆ ಇಬ್ಬರು ಓದಿ ಯಾವ ಸಾಮ್ರಾಜ್ಯ ಆಳಬೇಕು ಮನೇಲಿ ಚಾಕ್ರಿ ಯಾರ್ ಮಾಡ್ತಾರೆ ಅಂತ ದಿನ ಬೈಯುತ್ತಿದ್ದರು. ಅಣ್ಣ ಮುಂದೆ ಓದಲೇಬೇಕೆಂದು ಬೆಂಗಳೂರಲ್ಲಿ ಅಮ್ಮನ ದೂರದ ನೆಂಟರ ಮನೆ ಸೇರಿದ. ನಾನೊಬ್ಬಳೆ ಶಾಲೆಗೆ ನಡೆದು ಹೋಗುತ್ತಿದ್ದೆ. ಅಣ್ಣನಿದ್ದಾಗ ಅಷ್ಟು ಕಷ್ಟ ಆಗುತ್ತಿರಲಿಲ್ಲ ಈಗ ಕಾಲಿಗೆ ಚಪ್ಪಲಿ ಬೇಕೆನಿಸುತ್ತಿತ್ತು. ನಾನು ದೊಡ್ಡವಳ್ಳಾಗಿದ್ದೀನಿ ಅಂತನೊ ಎನೊ ಕೆಲವು ಹುಡುಗರು ದಾರಿಲಿ ಕೀಟಲೆ ಮಾಡಲು ಶುರು ಮಾಡಿದ್ರು. ಇಷ್ಟು ಸಾಕಿತ್ತು ಚಿಕ್ಕಮ್ಮನಿಗೆ ನನ್ನನ್ನು ಶಾಲೆಯಿಂದ ಬಿಡಿಸಲು. ಅಪ್ಪನಿಗೆ ಹೇಳಿ ಶಾಲೆ ಬಿಡಿಸಿ ಮನೆ ಕೆಲಸಕ್ಕೆ ಹಾಕಿಕೊಂಡಳು.

ಮನೆ ಕೆಲ್ಸದ ಜೊತೆ ತೋಟದ ಕೆಲ್ಸ, ಹಸು ಮೇಯಿಸೊದು, ಎಲ್ಲಾ ಕಲಿತೆ. ಹಿಂಗೆ ಐದಾರು ವರ್ಷ ಕಳೆದವು. ಅಣ್ಣ ಡಿಪ್ಲೋಮಾ ಮುಗಿಸಿ ಬೆಂಗಳೂರಲ್ಲೆ ನೌಕರಿ ಹಿಡ್ಕೊಂಡ. ಮೊದಲು ತಿಂಗಳಿಗೊಮ್ಮೆ ಬರುತ್ತಿದ್ದವ ಈಗ ಆರು ತಿಂಗಳಿಗೊಮ್ಮೆ ಮುಖ ತೋರಿಸೋಕೆ ಶುರು ಮಾಡಿದ. ನನ್ನ ಕಷ್ಟಕ್ಕೆ ಸ್ಪಂಧಿಸುತ್ತಿದ್ದ ಅವನೊಬ್ಬನು ಸಹ ಈಗ ಅಪರೂಪ ಆಗಿಬಿಟ್ಟ. ಅಪ್ಪ ಚಿಕ್ಕಮ್ಮನ ಮಾತು ಮೀರುತ್ತಿರಲಿಲ್ಲ. ಮನೆಕೆಲಸ ಎಲ್ಲ ನನ್ನ ಮೇಲೆ ಎರುತ್ತಿದ್ದಳು. ನನ್ನ ವಯಸ್ಸಿನವರಿಗೆಲ್ಲಾ ಊರಲ್ಲಿ ಮದುವೆಯಾಗಿ ಬಾಣಂತನಕ್ಕೆಂದು ತವರಿಗೆ ಬಂದ್ದಿದರು. ನನ್ನ ಮದುವೆ ಬಗೆ ಯಾರು ಯೋಚಿಸಿರಲಿಲ್ಲ. ಈ ಸಲ ಅಣ್ಣ ಊರಿಗೆ ಬಂದಾಗ ನಿನಗೊಂದು ಗಂಡು ನೋಡ್ತೀನಿ. ಅಪ್ಪ ಚಿಕ್ಕಮ್ಮ ಹೇಳುವ ತನಕ ನಿನ್ಗೆ ಮದುವೆ ಮಾಡೊಲ್ಲ ಅಂದ.

ಒಂದು ಭಾನುವಾರ ಬೆಂಗಳೂರಿನಿಂದ ಅವನ ಸ್ನೇಹಿತನನ್ನು ಕರೆತಂದು ನನಗೆ ಸ್ವಲ್ಪ ಅಲಂಕಾರ ಮಾಡಿಕೊಳ್ಳಲು ಹೇಳಿದ. ದೇವರು ನನಗೆ ಎಲ್ಲ ಕಿತ್ತು ಕೊಂಡರೂ ಸ್ವಲ್ಪ ಸೌಂದರ್ಯ ಕೊಟ್ಟಿದ್ರಿಂದನೋ ಎನೋ ಅಣ್ಣನ ಸ್ನೇಹಿತ ರವಿ ನನ್ನ ಮೆಚ್ಚಿಕೊಂಡರು. ನೀನು ಭೂಮಿ ಅವನು ರವಿ, ನಿನಗೆ ಬೆಳಕು ಕೋಡ್ತಾನೆ ಅಂತೇಳಿ ಮದುವೆ ತಯಾರಿ ಮಾಡೆ ಬಿಟ್ಟ. ಚಿಕ್ಕಮ್ಮನಿಗೆ ಮನೆಕೆಲ್ಸಕ್ಕೆ ಮಾತ್ರ ತೊಂದರೆ ಆದರೂ ಹೆಂಗೊ ಇವಳನ್ನ ಸಾಗಿ ಹಾಕಿದ್ರೆ ಸಾಕು ಅನ್ನಿಸಿತ್ತು.

ರವಿಗೆ ತಂದೆ ಇರಲಿಲ್ಲ. ಅಮ್ಮ ಮತ್ತು ತಂಗಿ ಸುಜಾತ. ತಂಗಿ ಮದುವೆ ಮಾಡಿ ಮನೆ ಜವಬ್ದಾರಿ ಅವರೆ ಹೊತ್ತಿದ್ದರು. ನನ್ನ ಅಣ್ಣ ರವಿ ಹತ್ತಿರ ನಾನು ಪಿ.ಯು.ಸಿ ಓದಿದ್ದೀನಿ ಅಂತೇಳಿ ಅವರ ಮನೆಯವರನ್ನೆಲ್ಲಾ ಒಪ್ಪಿಸಿದ್ದ. ಕೊರಳಿಗೆ ಮಾಂಗಲ್ಯ ಬಂದೆ ಬಿಟ್ಟಾಗ ಭಯ ಶುರುವಾಯಿತು. ಅಪ್ಪ ಚಿಕ್ಕಮ್ಮನಿಗೆ ನಮಸ್ಕರಿಸಿ, ತಂಗಿ ತಮ್ಮ ಇಬ್ಬರಿಗೂ ಮುತ್ತಿಟ್ಟು ಗಂಡನ ಮನೆ ತಲುಪಿದೆ. ಬೆಂಗಳೂರಿನ ಜೀವನ ನನಗೆ ಹೊಸದು. ಅತ್ತೆ ನನ್ನ ಸೊಸೆ ತರ ನೋಡಲೆ ಇಲ್ಲ. ಸುಜಾತ ಗಂಡನ ಮನೆಗೆ ಹೋದ ಮೇಲೆ ನನ್ನನ್ನೆ ಮಗಳೆಂದು ಭಾವಿಸಿದ್ದರು. ನನಗೆ ತಾಯಿ ಪ್ರೀತಿ ಅಲ್ಲಿ ಸಿಕ್ಕಿ ಹಿಗ್ಗಿ ಹೋಗಿದ್ದೆ.

ದಿನ ಕಳೆದಂತೆ ರವಿಗೆ ನಾನು ಹೆಚ್ಚು ಓದಿಲ್ಲ ಅಂತ ತಿಳಿದು ನನ್ನ ಮೇಲೆ ಸ್ವಲ್ಪ ಬೇಸರ ಆದರೂ ಅತ್ತೆಗೆ ಏನೂ ಅನ್ನಿಸಲಿಲ್ಲ. ಅವರು ನಿವೃತ್ತ ಶಿಕ್ಷಕಿ ಯಾದ್ದರಿಂದ ಪರವಾಗಿಲ್ಲ ಬಿಡಮ್ಮ ಅಂತೇಳಿ ಅವರೇ ಕೆಲವು ಇಂಗ್ಲೀಷ್ ಪದಗಳನ್ನು ಹೇಳಿಕೊಟ್ಟು ಕಲಿಸಿದರು. ತಾಯಿ ಪ್ರೀತಿ ಸಿಕ್ಕ ಕೆಲದಿನಗಳ ನಂತರ ನಾನು ತಾಯಿಯಾಗುವ ಭಾಗ್ಯ ಬಂತು. ನನ್ನವರಿಗೆ ಸಂಸಾರ ಕಷ್ಟ ಅನ್ನಿಸಿತೊ ಎನೋ, ತಂಗಿ ಮದುವೆಯ ಸಾಲಗಳನ್ನು ತೀರಿಸಲೊ ಎನೋ, ವಿದೇಶಕ್ಕೆ ಹೋಗಿ ದುಡಿಯುವ ಆಸೆ ಚಿಗುರಿ ಮೂರು ತಿಂಗಳ ಗರ್ಭಿಣಿಯನ್ನು ಬಿಟ್ಟು ದೂರದ ದುಬೈಗೆ ವಿಮಾನ ಹತ್ತಿದರು. ಅಪ್ಪನಿಗೆ ನನ್ನ ನೆನಪಾದರೂ ಚಿಕ್ಕಮ್ಮನ ಅನುಮತಿ ಇಲ್ಲದೆ ಬರುವ ಆಗಿರಲಿಲ್ಲ. ಅಣ್ಣ ಒಂದೆರಡು ಸಲ ಬಂದು ಹೋಗಿದ್ದ. ಅಣ್ಣ ನನ್ನ ಗಂಡನ ಸ್ನೇಹಿತನಾದ್ದರಿಂದ ಅತ್ತೆಗೆ ಚೆನ್ನಾಗಿ ಪರಿಚಯವಿದ್ದು ಬೇಸರವಾದಾಗ ಅಣ್ಣನ ಜೊತೆ ಮಾತಾಡು ಅಂತ ಅತ್ತೆಯೇ ಫೋನ್ ಮಾಡಿಕೊಡುತ್ತಿದ್ದರು. ಒಂದಿನ ಅಣ್ಣ ತನ್ನ ಮದುವೆಯ ಪತ್ರಿಕೆಯೊಂದಿಗೆ ಬಂದಾಗ ನನ್ನಷ್ಟೇ ಅತ್ತೆಗೂ ಗಾಬರಿಯಾಯ್ತು. ತನ್ನ ಅಫೀಸಲ್ಲೆ ಕೆಲಸ ಮಾಡುವ ಹುಡುಗಿ, ಅವರ ಮನೆಯಲ್ಲೆ ಅಳಿಯನಾಗಿರಬೇಕೆಂದಿದ್ದಾರೆ ಅಂದ. ಅಣ್ಣನ ಮದುವೆಯಲ್ಲೆ ಅಪ್ಪ, ಚಿಕ್ಕಮ್ಮ, ತಂಗಿ, ತಮ್ಮ ಎಲ್ಲರನ್ನು ನೋಡಿದೆ. ನನ್ನವರು ಮದುವೆಗೂ ಬರಲು ಆಗಲಿಲ್ಲ. ಆಗೊಮ್ಮೆ ಹೀಗೊಮ್ಮೆ ಫೋನ್ ಮಾಡುತ್ತಿದ್ದರು. ಅಪ್ಪನಿಗೆ ನಾನು ಗರ್ಭಿಣಿ ಅಂತ ಗೊತ್ತದರೂ ಎನೂ ಕೇಳಲಿಲ್ಲ. ಚಿಕ್ಕಮ್ಮ ನನಗ್ಯಾಕೆ ಅಂತ ನನ್ನ ಆರೋಗ್ಯ ಸಹ ವಿಚಾರಿಸಲಿಲ್ಲ. ಕರುಳ ಕುಡಿ ಹೊರ ಜಗತ್ತು ಕಾಣಲು ಕಣ್ಣು ಬಿಟ್ಟಿತು. ನನಗೆ ಬೇಕಾದುದ್ದನ್ನು ಅತ್ತೆ ತಂದು ಕೊಟ್ಟು ಮೊಮ್ಮಗಳನ್ನು ಆಡಿಸುತ್ತಿದ್ದರು. ಮಾಸಗಳು ಉರುಳಿದಂತೆ ನನ್ನವರ ಸಂಪರ್ಕ ಕಡಿಮೆ ಆಗ್ತಾ ಬಂತು.

ಒಂದಿನ ಸುಜಾತ ಗಂಟು ಮೂಟೆ ಕಟ್ಟಿಕೊಂಡು ಮಗಳ ಜೊತೆ ಮನೆಗೆ ಬಂದು, ತನ್ನ ಗಂಡ ಸರಿ ಇಲ್ಲ, ದಿನ ಕುಡಿದು ಬಂದು ಬಡಿತಾನೆ, ನಾನು ಇನ್ಮೇಲೆ ಅಲ್ಲಿಗೆ ಹೋಗಲ್ಲ ಅಂತೇಳಿ ಇಲ್ಲೆ ಉಳಿದಳು. ಅತ್ತೆಗೆ ಯೋಚನೆ ಶುರುವಾಗಿ ಆರೋಗ್ಯ ಏರುಪೇರಾಗುತ್ತಿತ್ತು. ಮನೆಯ ಖರ್ಚೆಲ್ಲಾ ಅವರ ಪಿಂಚಣಿಯಿಂದಲೆ ನಡೆಯುತ್ತಿದ್ದರೂ ಮಗ ಇಲ್ಲದ್ದರಿಂದ ಮಗಳೆ ಮನೆಯ ಅಧಿಕಾರ ಹಿಡಿಯಲಾರಂಭಿಸಿದಳು. ನನ್ನವರು ಹಣ ಕಳಿಸುತ್ತಿರಲಿಲ್ಲ. ತಂಗಿಯ ಮದುವೆ ಸಾಲ ತೀರಿಸುತ್ತಿದ್ದರಿಂದ ನಾನು ಎನೂ ಕೇಳುತ್ತಿರಲಿಲ್ಲ.

ಒಂದು ಮುಂಜಾನೆ ರವಿ ದುಬೈನಲ್ಲಿ ಅಪಘಾತಕೀಡಾಗಿ ಕೊನೆಯುಸಿರೆಳೆದರು ಅನ್ನೋ ಫೋನಿನ ಸುದ್ದಿ ಬೆಚ್ಚಿ ಬೀಳಿಸಿತು. ನಾನು ಅತ್ತೆ ದಿಗ್ ಭ್ರಮೆಗೊಂಡು ದಿಕ್ಕು ತೋಚದಂತಾಯಿತು. ಕಾಲು ಸ್ವಾಧೀನ ಕಳೆದುಕೊಂಡು ಕಣ್ಣು ಮೈಯಲ್ಲಿದ್ದ ನೀರನ್ನೆಲ್ಲಾ ಹೊರ ಹಾಕಿತು. ಆರು ದಿನಗಳಾದ ಮೇಲೆ ಪೆಟ್ಟಿಯಲ್ಲಿ ಮಲಗಿದ್ದ ಅವರ ಪಾರ್ಥಿವ ಶರೀರ ಮನೆ ತಲುಪಿದಾಗ ಎನೂ ಅರಿಯದ ನನ್ನ ಮಗಳು ಅಪ್ಪನನ್ನು ಮಾತನಾಡಿಸುತ್ತಿದ್ದಳು. ಅಣ್ಣ ಬಂದು ಎಲ್ಲಾ ಕಾರ್ಯ ಮುಗಿಸಿ ಹೊರಟನು. ಒಂದೆರಡು ದಿನ ಮನೆಗೆ ಬಾ ಅಂತ ಕರೆದರೂ ಅತ್ತೆಯನ್ನು ಬಿಟ್ಟು ನಾನೆಲ್ಲೂ ಹೋಗಲಿಲ್ಲ. ನನ್ನ ಪಾಲಿನ ರವಿ ನನಗಿಲ್ಲದಿದ್ದರೂ ಆಕಾಶದಲ್ಲಿ ದಿನ ಬಂದು ಹೋಗುತ್ತಿದ್ದ. ಅತ್ತೆ ಕೊರಗಿ ಕೊರಗಿ ಹಾಸಿಗೆಯಲ್ಲೆ ಕೊನೆಯುಸಿರೆಳೆದಾಗ ನಾನಿನ್ನು ಕುಸಿದೆ. ಮನೆಗೆ ಗಂಡು ದಿಕ್ಕು ಇಲ್ಲದಂತಾಯಿತು. ಅತ್ತೆಗೆ ಬರುತ್ತಿದ್ದ ಪಿಂಚಣಿ ನಿಂತು ಹೋದಾಗ ನಾನು ಮಗಳನ್ನು ಮನೆಯಲ್ಲೆ ಬಿಟ್ಟು ಹತ್ತಿರವಿದ್ದ ಗಾರ್ಮೆಂಟ್ಸ್ ಗೆ ಸೇರಿದೆ. ಹಸಿವು ನನಗೆ ಕೆಲಸ ಕಲಿಸ ತೊಡಗಿತು. ಸುಜಾತ ತನ್ನ ಮಗಳೊಂದಿಗೆ ನನ್ನೊಂದಿಗೆಯೇ ಇದ್ದಳು. ಅವಳು ಸ್ವಲ್ಪ ಓದಿದ್ದರಿಂದ ಆಫೀಸ್ ಕೆಲಸ ಗಿಟ್ಟಿಸಲೇನು ಹೆಚ್ಚು ಸಮಯ ಬೇಕಿರಲಿಲ್ಲ. ಅವಳು ಸಹ ಮಗಳನ್ನು ಮನೆಯಲ್ಲೆ ಬಿಟ್ಟು ದುಡಿಯಲಾರಂಭಿಸಿದಳು.

ಅತ್ತೆ ಶಿಕ್ಷಕಿ ವೃತ್ತಿಯಿಂದ ಕೂಡಿಟ್ಟ ಹಣ ಮತ್ತು ನಿವೃತ್ತಿಯಾದಾಗ ಬಂದ ಹಣದಿಂದ ಮನೆ ಕೊಂಡು ಕೊಂಡಿದ್ದರಿಂದ ಸಧ್ಯ ಮನೆ ಬಾಡಿಗೆ ಕಟ್ಟುವ ಆಗಿಲ್ಲ ಅಂತ ದೇವರಿಗೆ ಕೈ ಮುಗಿಯುತ್ತಿದ್ದೆ. ದಿನಕಳೆದಂತೆ ಸುಜಾತ ಬದಲಾಗುತ್ತ ಹೋದಳು. ಮಗಳ ಮೇಲಿನ ಕಾಳಜಿ ಕಮ್ಮಿಯಾಗಿ ಸಂಜೆ ತಡವಾಗಿ ಬರುತ್ತಿದ್ದಳು. ಅವಳ ಆಫೀಸಿನ ಯುವಕ ನಾಗರಾಜ್ ಆಗಾಗ ಅವಳನ್ನು ಮನೆಗೆ ಬಿಡುತ್ತಿದ್ದವನು ಈಗ ಮನೆಗೆ ಬಂದು ಹೆಚ್ಚು ಸಮಯ ಇಲ್ಲೆ ಕಳೆಯಲು ಶುರು ಮಾಡಿದ. ನನಗೆ ಕಸಿವಿಸಿ ಆಗಿ ಒಂದೆರಡು ಬುದ್ಧಿಮಾತು ಹೇಳಿದರೂ ಅವಳು ಕೇಳುವ ಸ್ಥಿತಿಯಲಿರಲಿಲ್ಲ. ಅವಳ ಮಗಳು ಸ್ವಾತಿ ಸಹ ನನ್ನ ಮಗಳೊಂದಿಗೆ ಆಟ ಆಡುತ್ತ ಬೆರೆತು ಹೋಗಿದ್ದಳು.

ಕೆಲ ದಿನಗಳ ನಂತರ ಮಾತುಗಳು ಬದಲಾಗಿ ಅವಳ ಮನೆಯಲ್ಲಿ ನಾನು ಅವಳಿಗೆ ಭಾರವಾಗಿರುವ ತರಹ ನಡೆದುಕೊಳ್ಳಲಾರಂಬಿಸಿದಳು. ಕೆಂಡವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳಲಾಗದಂತೆ ನಾವಿರುವ ಮನೆ ತನ್ನದೆ ಎಂದು ಕಾಗದ ಪತ್ರಗಳನ್ನು ತೋರಿಸಿದಳು. ಅಷ್ಟೊಂದು ಅರಿವು ಇಲ್ಲದ ನಾನು ಅದನ್ನೆಲ್ಲ ಪರೀಕ್ಷಿಸಲಿಲ್ಲ. ಅತ್ತೆ ಇವಳ ಹೆಸರಿಗೆ ಬರೆದು ಕೊಟ್ಟಿದರೊ ಅಥವಾ ಇವಳೆ ಅತ್ತೆಯ ಸಹಿ ಮಾಡಿದ್ದಳೊ ನನಗೆ ಗೊತ್ತಿರಲಿಲ್ಲ. ಅವಳ ಸ್ನೇಹಿತ ನಾಗರಾಜನೊಂದಿಗೆ ಅವಳು ಇರುವುದಾಗಿ ಹೇಳಿದಾಗ ನಾನು ಮನೆ ಬಿಟ್ಟು ಹೊರಗಡೆ ಬಂದೆ. ಮಗಳ ಜೊತೆ ಹೊರಟಾಗ ಸ್ವಾತಿ ಸಹ ನನ್ನ ಮಗಳ ಜೊತೆ ಬರುತ್ತೀನಿ ಅಂತ ಹಠ ಹಿಡಿದಳು. ನಾಗರಾಜನಿಗೆ ಆ ಮಗು ಅಷ್ಟು ಇಷ್ಟವಿಲ್ಲದ ಕಾರಣಕ್ಕೊ ಎನೋ ಸುಜಾತ ಸ್ವಾತಿಯನ್ನು ತಡೆಯದೆ ಇದ್ದಾಗ ನಾನು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೊರಬಂದೆ.

ಅಣ್ಣನ ಮನೆಗೆ ಹೋಗಲು ಮನಸಾಗದೆ ಬೃಹತ್ ಬೆಂಗಳೂರಲ್ಲಿ ಆಶ್ರಯ ಕಷ್ಟವಾಯಿತು. ಹಣವಿಲ್ಲದೆ ಗಾರ್ಮೆಂಟ್ಸ್ ನಲ್ಲಿ ಸೆಕ್ಯುರಿಟಿಗೆ ಬೇಡಿಕೊಂಡು ಕೆಲದಿನ ಜನರೇಟರ್ ರೂಮಿನಲ್ಲೆ ವಾಸ ಮಾಡಿದೆ. ಸ್ವಲ್ಪ ಸಾಲ ಮಾಡಿ ಒಂದು ಬಾಡಿಗೆ ಮನೆ ಪಡೆದು ಈಗ ನಿಟ್ಟುಸಿರು ಬಿಡುತ್ತಿರುವಾಗ ಇನ್ನೊಂದು ಆತಂಕ ಶುರುವಾಯಿತು. ನಾನು ಜನರೇಟರ್ ರೂಮಿನಲ್ಲಿದ್ದ ವಿಷಯ ತಿಳಿದ ನನ್ನ ಸೂಪರ್ ವೈಸರ್ ಚಂದ್ರು ಕರೆದು ಕೇಳಿದಾಗ ನನ್ನ ಕಥೆ ಹೇಳಿದೆ. ಅವರಿಗೆ ಎನನಿಸಿತೊ ಗೊತ್ತಿಲ್ಲ, ಮರುದಿನ ನನ್ನ ಮದುವೆಯಾಗುವುದಾಗಿ ಹೇಳಿ ಒಪ್ಪಿಗೆ ಕೇಳಿದರು. ನನಗೆ ಮತ್ತೆ ಆಕಾಶ ಕಳಚಿ ಬಿದ್ದಂತಾಯಿತು. ಯೋಚಿಸಲು ಸಮಯ ಬೇಕೆಂದು ಹೊರಬಂದೆ. ರವಿಯನ್ನು ಕಳೆದು ಕೊಂಡ ಭೂಮಿಗೆ ಚಂದ್ರ ಬೆಳಕು ಕೊಡುತ್ತಾನೆಯೇ....ನನ್ನ ನಂಬಿರುವ ಎರಡು ಮಕ್ಕಳನ್ನು ಸ್ವೀಕರಿಸುವನೇ....ನಂಬಿ ಹೋಗಲೆ...? ಮನಸ್ಸು ಒಪ್ಪುತ್ತಿಲ್ಲ .... ನೀವೆ ಹೇಳಿ...








ಬುಧವಾರ, ಆಗಸ್ಟ್ 15, 2012

ಹ(ಅ)ವಳ





ನಲ್ಲೆ,

ನೀನೆ ಬೇಕೆಂದೆ

ಮುತ್ತು, ರತ್ನ, ಹವಳ....

ರತ್ನ ಸಿಗಲಿಲ್ಲ

ಮುತ್ತು ಅವಳಲ್ಲೆ ಇಹುದು

ಎಂದು ತಂದೆ ಅವಳ....   

       

ಶುಕ್ರವಾರ, ಜುಲೈ 27, 2012

ಪರಿಮಳ




ನಲ್ಲೆ ನೀನಿಲ್ಲದಾಗ
ಮನೆ ಸ್ವಚ್ಚವಿರೊಲ್ಲವೆಂದು
ಪಡೆಯದಿರು ಕಳವಳ....

ನೀನಿಲ್ಲದಿದ್ದರೂ
ಮನೆಯಲ್ಲೀಗ ಸದಾ
ತುಂಬಿರುವುದು ಪರಿಮಳ.....





ಶುಕ್ರವಾರ, ಜನವರಿ 20, 2012

ಅರ್ಪಣೆ

ನನ್ನ ಬದುಕಿನಲ್ಲಿ ಹೊಸ ಮಜಲುಗಳನ್ನೇ ಸೃಷ್ಟಿಸಿದ ನನ್ನ ಬಾಳ ಸಂಗಾತಿಗೆ...


ಮೃದುವಾದ ಮನಸು
ಹೂವಿನಂತ ಬೆಡಗು
ಕಪಟವಿಲ್ಲದ ಗು
ಕೂಡಿ ಆಗಿರುವೆಯಾ ನೀ ಸುಗುಣ


ನಿಶ್ಕಲ್ಮಶ ಹೃದಯ
ನಡೆನುಡಿ ವಿನಯ
ಯಾರಿಗೂ ಮಾಡದು ಗಾಯ
ಸನಿಹವಿದ್ದೆಡೆ ನೋವು ಮಂಗಮಾಯ


ಸಾಹಿತ್ಯದಲ್ಲಿ ಆಸಕ್ತಿ
ಗುರುಹಿರಿಯರಲ್ಲಿ ಭಕ್ತಿ
ಇನಿಯನಿಗೆ ತುಂಬಿರುವೆ ಶಕ್ತಿ
ಕಂದನಿಗಾಗಿರುವೆ ಸ್ಪೂರ್ತಿ


ಜಾಣೆಯರಲ್ಲಿ ಜಾಣೆ 
ಸುಂದರ ಗುಣ ಸಂಪನ್ನೆ
ಎನಗೊಲಿದ ಮನದನ್ನೆ
ನಿನಗಿದೊ ಜನುಮದಿನದ ಶುಭಾಶಯ......





ಸೋಮವಾರ, ಡಿಸೆಂಬರ್ 26, 2011

ನಾಯಿಪ್ರೀತಿ





ಸಂಜೆ ಹೊತ್ತಲಿ 
ರಸ್ತೆ ಬದಿಯಲಿ
ನೀ ಕಾಯುತ್ತಿದ್ದ ಕಂಡು 
ನಾ ಪೂರ್ಣ ಮನಸೋತಿದ್ದೆ...


ನಂತರವೇ ತಿಳಿದಿದ್ದು
ನೀ ಕಾದಿದ್ದು 
ಲೈಟ್ ಕಂಬದ ಬಳಿ ಇದ್ದ
ನಿನ್ನ ನಾಯಿಮರಿ ಬರಲೆಂದು...

ಗುರುವಾರ, ಸೆಪ್ಟೆಂಬರ್ 08, 2011

ಸವಾಲು



ಬೇರಿನಿಂದ ಗಟ್ಟಿಯಾಗಿರಲು
ಗಾಳಿ ಹಾಕುವುದು
ಮರಕ್ಕೆ ಸವಾಲು....


ಬಿಯರಿನಿಂದ ಟೈಟಾಗಿರಲು
ಅವನಾಕುತ್ತಾನೆ
ಹೆಂಡತಿಗೆ ಸವಾಲು.....



ಬುಧವಾರ, ಜುಲೈ 20, 2011

ವೆಲ್ಕಮ್ಮು


 
ಕುಡಿದು ಮನೆಗೆ
ಬಂದಾಗ ಮಾತ್ರ
ಹೇಳುತ್ತಾಳವಳು
ವೆಲ್ಕಮ್ಮು....

ಯಾಕಂದ್ರೆ ಮನೆಗೆ
ತಂದಿರೋದ್ರಲ್ಲಿ
ಲಪಟಾಯಿಸುತ್ತಾಳವಳು
ಬೈಟು ರಮ್ಮು.....




ಮಂಗಳವಾರ, ಜುಲೈ 05, 2011

ಬೆಳ್ಳಿ ಕಾಲುಂಗುರ







ಕಪ್ಪನೆ ಮೋಡದೊಳಗೆ
ಮಿನುಗುತಿಹುದು
ಯಾರದೋ ಬೆಳ್ಳಿ ಕಾಲುಂಗುರ....

ಮೋಡ ಸರಿಸಿ
ನೋಡಿದೊಡೆ
ಕಂಡಿದ್ದು ಆ ಬೆಳ್ಳಿ ಚಂದಿರ......

ಎಂತ ಸೊಬಗು ಅವನ ಸೌಂದರ್ಯ
ಸವಿದ ಕಣ್ಣಿಗೇ ಗೊತ್ತು
ಆ ಚಂದ್ರಮನ ಚಿತ್ತಾರ.....





ಬುಧವಾರ, ಮೇ 11, 2011

ಬುಧವಾರ, ಏಪ್ರಿಲ್ 13, 2011

ಬುಧವಾರ, ಮಾರ್ಚ್ 30, 2011

ಲಂಚ



ಮಗನ ಉನ್ನತ ವಿಧ್ಯಾಭ್ಯಾಸಕ್ಕಾಗಿ ಅಪ್ಪ ಟೇಬಲ್ ಕೆಳಗೆ ಬಹಳ ದುಡ್ಡು ಸಂಪಾದನೆ ಮಾಡಿಟ್ಟಿದ್ದ.....ಆದರೆ ಮಗ ಎಸ್.ಎಸ್.ಎಲ್.ಸಿ. ದಾಟಲೇ ಇಲ್ಲ.....



ಸೋಮವಾರ, ಮಾರ್ಚ್ 21, 2011

ಮಂಗಳವಾರ, ಮಾರ್ಚ್ 01, 2011

ಮಂಗಳವಾರ, ಫೆಬ್ರವರಿ 22, 2011

ಬಿಟ್ಟಿರಲಾರೆ



ನಾನೆಂದೂ
ಇರಲಾರೆ
ನಿನ್ನ ಬಿಟ್ಟು.....


ಯಾಕೆಂದ್ರೆ
ನಿನ್ನೆಸರಿನಲ್ಲೇ
ಇರುವುದು ನಿಮ್ಮಪ್ಪನ
ಫ್ಲ್ಯಾಟು -ಸೈಟು......



ಮಂಗಳವಾರ, ಫೆಬ್ರವರಿ 01, 2011

ಸೋಮವಾರ, ಡಿಸೆಂಬರ್ 13, 2010

ಏಕೆ....??



ವಾಕಿಂಗ್ ಮಾಡಲು
ಮುದ್ದಾದ ನಾಯಿ
ಬೇಕೆಂದಳು ಅವನಾಕೆ....

ಅವನಂದನು
ನಾ ನಿನ್ನೊಂದಿಗೆ
ಇರುವಾಗ ಅದಿನ್ಯಾಕೆ....


ಬುಧವಾರ, ನವೆಂಬರ್ 17, 2010

ಪ್ರತಿಭಾ



ನೀ ಹೇಳಿದೆ 

ಬುದ್ಧಿ ಇರುವವರು  

ಬುದ್ಧಿವಂತರು ಎಂದು...



  ಈಗೇಳು, ನೀ


     ನನ್ನೊಂದಿಗಿದ್ರೆ
     
  ನಾ ಪ್ರತಿಭಾವಂತನಲ್ಲವೇ...?



ಸೋಮವಾರ, ಅಕ್ಟೋಬರ್ 25, 2010

ನೆನೆದು



ನೀರಿನಲ್ಲಿ 
ನೆನೆದು ನೆನೆದು
ಕಲ್ಲು ಕರಗಲೇ ಇಲ್ಲಾ ....


ಮನದಲ್ಲೇ 
ನಿನ್ನ ನೆನೆದು
ಕರಗಿ ಹೋದೆನಲ್ಲಾ ....



ಬುಧವಾರ, ಅಕ್ಟೋಬರ್ 06, 2010

ಸೋಮವಾರ, ಸೆಪ್ಟೆಂಬರ್ 20, 2010

ತರಲೆ



ನಲ್ಲ, ನೀ ಹೇಳುತ್ತಿದ್ದೆ
ಯಾವಾಗಲೂ 
ಮುತ್ತು ತರಲೆ ಎಂದು....


ನೀ ಕೊಟ್ಟ ಮೇಲೆ
ತಿಳಿಯಿತು 
ನೀ ಬಲು ತರಲೆ ಎಂದು.....







ಮಂಗಳವಾರ, ಆಗಸ್ಟ್ 10, 2010

ಬೆಳಗು



ಮನೆಯನ್ನು ಬೆಳೆಗಲು
ಮಡದಿಯನ್ನು ತಂದನು....


ಅವಳ ಜೊತೆಗೀಗಾ
ಅವನು ಬೆಳಗುತ್ತಿರುವನು
ಪಾತ್ರೆಯನ್ನು.....





ಮಂಗಳವಾರ, ಜುಲೈ 06, 2010

ರಂಭೆ



ಬೀಳುವಂತಾದರೆ
ರಂಭೆಯನ್ನು
ಹಿಡಿದುಕೊ ಅಂದಳು....


ಬೀಳುವ ನೆಪವನೊಡ್ಡಿ
ಆ ರಂಭೆಯನ್ನು 
ಹಿಡಿದುಕೊಂಡೇ ಬಿಟ್ಟನು....





ಬುಧವಾರ, ಜೂನ್ 16, 2010

ಅಂದ - ಚೆಂದ



ಪದ ಪುಂಜಗಳು
ಸಾಲಲಿಲ್ಲ ಬಣ್ಣಿಸಲು
ಅವಳ ಅಂದ ಚೆಂದ....


ಪಕ್ಕದಲ್ಲಿ ನಿಲ್ಲಲು
ಬಿಡಲಿಲ್ಲ ಅವಳ
ಬಾಯಿಯ ದುರ್ಗಂಧ....





ಮಂಗಳವಾರ, ಜೂನ್ 01, 2010

ಹೆಲ್ಮೆಟ್ಟು




ಪಲ್ಸರಿನಲ್ಲೆ ಪಾರ್ಕಿಗೋಗಲು

ಪದ್ದು ಹಿಡಿದಳು ಪಟ್ಟು.....


ಪಕ್ಕದಲ್ಲಿ ಇದ್ದದ್ದು


ತರ್ಕಾರಿ ಮಾರ್ಕೆಟ್ಟು....


ಎದುರಲ್ಲಿ ಬಂದವಳಿಗೂ


ನನ್ನಾಕೆಗೂ ಸ್ನೇಹದ ನಂಟು....


ಅವಳ್ಕಣ್ಣ ತಪ್ಸಿದ್ದು


ನನ್ ಕೂಲಿಂಗ್ಲಾಸು ಹೆಲ್ಮೆಟ್ಟು.....





ಸೋಮವಾರ, ಮೇ 10, 2010

ನನ್ ಪ್ರೀತಿ





ನನ್ ಪ್ರೀತಿ

ಹೂವಿನ ತರಹ
ಬಾಡುವುದಿಲ್ಲ....


ಮಂಜಿನ ತರಹ
ಕರಗುವುದಿಲ್ಲ.....


ಗಾಜಿನ ತರಹ 
ಒಡೆಯೊವುದಿಲ್ಲ.....


ನೀ ನನ್ನ ಪ್ರೀತಿಸದಿದ್ದರೆ
ಬೇರೆಯವರಿಗೆ ರವಾನೆಯಾಗುತ್ತಷ್ಟೇ......