ಭಾನುವಾರ, ಡಿಸೆಂಬರ್ 16, 2012

ನನ(ನ್ನ) ಗಲ್ಲ


ಕೋಪವೇಕೆ ನಲ್ಲೆ....?
ನೀನೆ ಕೇಳಿದೆ
ನಿನಗೆ ಬೇಕಾ..? ಎಂದು
ನನಗಲ್ಲ....!!!
ಈ ಮಗುವಿಗೆಂದು
ಹೇಳದೆಯೇ
ತೋರಿಸಿದೆ
ನನ್ನ ಗಲ್ಲ.......!!!! :)

ಸೋಮವಾರ, ನವೆಂಬರ್ 19, 2012

ಅ(ಭ)ಯ




ಹೆದರಲಿಲ್ಲ ನೀನು
ಆಗುವುದೆಂದು ಪ್ರಳಯ...

ನಡುಗುವುದೇಕಿಂದು
ಆಯಿತೆಂದು ಪ್ರಣಯ....

ಆ ಭಯ ಓಡಿಸುವೆನೆಂದು
ಕೊಡುವೆ ನಿನಗೆ ಅಭಯ.....

ಕೈ ಬಿಡುವೆನೆಂದು
ಬೇಡ ನಿನ್ನಲ್ಲಿ ಸಂಶಯ....

ಮತ್ತೆಂದೂ ಬಾರದು 
ನಮಗೆ ಈ ಪ್ರಾಯ....



ಶುಕ್ರವಾರ, ಅಕ್ಟೋಬರ್ 19, 2012

ಬಲ



ನನ್ನ ವರಿಸುವ 
ನಿನ್ನ ಹಂಬಲ....

ಅದಕ್ಕಿಲ್ಲವೆಂದು
ನಿನ್ನಪ್ಪನ ಬೆಂಬಲ...

ಆಗಿದೆಯಾ ನಿನ್ನ
ಮನ ಗೊಂದಲ...

ಚಿಂತಿಸದಿರು ನಲ್ಲೆ
ನಮ್ ಪ್ರೀತಿಗೆ ನೂರಾನೆ ಬಲ....




ಬುಧವಾರ, ಸೆಪ್ಟೆಂಬರ್ 05, 2012

ನುಂಗಲಾರದ ತುತ್ತು





ನನ್ನ ಅಮ್ಮ ಇದ್ದಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಮನದಲ್ಲೆ ಆ ದೇವರನ್ನು ಶಪಿಸುತ್ತಿದ್ದೆ. ಅಮ್ಮ ಹೇಗಿದ್ದಳು ಎಂದು ಕಲ್ಪಿಸಲು ಸಹ ಆಗುತ್ತಿಲ್ಲ. ಅಮ್ಮ ಅಂತ ನಾನು ಅವಳನ್ನು ಕರೆಯುವ ಮೊದಲೆ ಅವಳು ಈ ಲೋಕ ತ್ಯಜಿಸಿದ್ದಳು. ಅಪ್ಪ ಅಣ್ಣನೊಂದಿಗೆ ನನ್ನನ್ನು ಸಹ ನೋಡಿಕೊಳ್ಳಲೆಂದು ಮಲತಾಯಿಯನ್ನು ತಂದಿದ್ದರು. ನಾನು ಅವಳನ್ನು ಅಮ್ಮ ಅಂತ ಅಂದುಕೊಂಡಿದ್ದರೂ ಅವಳಿಗ್ಯಾಕೊ ನಾನು ಮಗಳು ಅಂತ ಅನ್ನಿಸಲೇ ಇಲ್ಲ. ಕುಣಿಗಲ್ ತಾಲೂಕು ಮಾದೆಗೌಡನದೊಡ್ಡಿ ಅನ್ನೋ ಸಣ್ಣಗ್ರಾಮದಲ್ಲಿ ಎಳನೇ ತರಗತಿ ಮುಗಿಸಿದರೂ ಮುಂದೆ ಓದಲು ನಮ್ಮೂರಲ್ಲಿ ಪ್ರೌಢ ಶಾಲೆ ಇರಲಿಲ್ಲ. ಅಪ್ಪ ಬಡರೈತನಾಗಿದ್ದರೂ ಮಗಳು ಇನ್ನಷ್ಟು ಓದಲಿ ಅಂತ ೪ ಕಿಲೋಮೀಟರ್ ದೂರದ ಸಂಪಿಗೆಹಳ್ಳಿಗೆ ಸೇರಿಸಿದ್ದರಿಂದ ನಾನು ಅಣ್ಣ ಒಟ್ಟಿಗೆ ಹೋಗುತ್ತಿದ್ದೆವು. ಬೇಲಿ ದಾಟಿ ಬಂಡೆ ಹತ್ತಿ ಕಲ್ಲು ಮುಳ್ಳಿನ ದಾರಿಯಾಗಿದ್ದರೂ ಹೆಂಗೊ ಎಂಟನೆ ಕ್ಲಾಸ್ ಮುಗಿಸಿದೆ. ಅಣ್ಣ ಹತ್ತನೇ ಕ್ಲಾಸ್ ಪಾಸ್ ಮಾಡಿ ಇನ್ನು ಓದಬೇಕೆಂದನು. ನನ್ನ ಚಿಕ್ಕಮ್ಮನಿಗೆ ನಮ್ಮನ್ನು ಓದಿಸಲು ಇಷ್ಟವಿಲ್ಲದೆ ಇಬ್ಬರು ಓದಿ ಯಾವ ಸಾಮ್ರಾಜ್ಯ ಆಳಬೇಕು ಮನೇಲಿ ಚಾಕ್ರಿ ಯಾರ್ ಮಾಡ್ತಾರೆ ಅಂತ ದಿನ ಬೈಯುತ್ತಿದ್ದರು. ಅಣ್ಣ ಮುಂದೆ ಓದಲೇಬೇಕೆಂದು ಬೆಂಗಳೂರಲ್ಲಿ ಅಮ್ಮನ ದೂರದ ನೆಂಟರ ಮನೆ ಸೇರಿದ. ನಾನೊಬ್ಬಳೆ ಶಾಲೆಗೆ ನಡೆದು ಹೋಗುತ್ತಿದ್ದೆ. ಅಣ್ಣನಿದ್ದಾಗ ಅಷ್ಟು ಕಷ್ಟ ಆಗುತ್ತಿರಲಿಲ್ಲ ಈಗ ಕಾಲಿಗೆ ಚಪ್ಪಲಿ ಬೇಕೆನಿಸುತ್ತಿತ್ತು. ನಾನು ದೊಡ್ಡವಳ್ಳಾಗಿದ್ದೀನಿ ಅಂತನೊ ಎನೊ ಕೆಲವು ಹುಡುಗರು ದಾರಿಲಿ ಕೀಟಲೆ ಮಾಡಲು ಶುರು ಮಾಡಿದ್ರು. ಇಷ್ಟು ಸಾಕಿತ್ತು ಚಿಕ್ಕಮ್ಮನಿಗೆ ನನ್ನನ್ನು ಶಾಲೆಯಿಂದ ಬಿಡಿಸಲು. ಅಪ್ಪನಿಗೆ ಹೇಳಿ ಶಾಲೆ ಬಿಡಿಸಿ ಮನೆ ಕೆಲಸಕ್ಕೆ ಹಾಕಿಕೊಂಡಳು.

ಮನೆ ಕೆಲ್ಸದ ಜೊತೆ ತೋಟದ ಕೆಲ್ಸ, ಹಸು ಮೇಯಿಸೊದು, ಎಲ್ಲಾ ಕಲಿತೆ. ಹಿಂಗೆ ಐದಾರು ವರ್ಷ ಕಳೆದವು. ಅಣ್ಣ ಡಿಪ್ಲೋಮಾ ಮುಗಿಸಿ ಬೆಂಗಳೂರಲ್ಲೆ ನೌಕರಿ ಹಿಡ್ಕೊಂಡ. ಮೊದಲು ತಿಂಗಳಿಗೊಮ್ಮೆ ಬರುತ್ತಿದ್ದವ ಈಗ ಆರು ತಿಂಗಳಿಗೊಮ್ಮೆ ಮುಖ ತೋರಿಸೋಕೆ ಶುರು ಮಾಡಿದ. ನನ್ನ ಕಷ್ಟಕ್ಕೆ ಸ್ಪಂಧಿಸುತ್ತಿದ್ದ ಅವನೊಬ್ಬನು ಸಹ ಈಗ ಅಪರೂಪ ಆಗಿಬಿಟ್ಟ. ಅಪ್ಪ ಚಿಕ್ಕಮ್ಮನ ಮಾತು ಮೀರುತ್ತಿರಲಿಲ್ಲ. ಮನೆಕೆಲಸ ಎಲ್ಲ ನನ್ನ ಮೇಲೆ ಎರುತ್ತಿದ್ದಳು. ನನ್ನ ವಯಸ್ಸಿನವರಿಗೆಲ್ಲಾ ಊರಲ್ಲಿ ಮದುವೆಯಾಗಿ ಬಾಣಂತನಕ್ಕೆಂದು ತವರಿಗೆ ಬಂದ್ದಿದರು. ನನ್ನ ಮದುವೆ ಬಗೆ ಯಾರು ಯೋಚಿಸಿರಲಿಲ್ಲ. ಈ ಸಲ ಅಣ್ಣ ಊರಿಗೆ ಬಂದಾಗ ನಿನಗೊಂದು ಗಂಡು ನೋಡ್ತೀನಿ. ಅಪ್ಪ ಚಿಕ್ಕಮ್ಮ ಹೇಳುವ ತನಕ ನಿನ್ಗೆ ಮದುವೆ ಮಾಡೊಲ್ಲ ಅಂದ.

ಒಂದು ಭಾನುವಾರ ಬೆಂಗಳೂರಿನಿಂದ ಅವನ ಸ್ನೇಹಿತನನ್ನು ಕರೆತಂದು ನನಗೆ ಸ್ವಲ್ಪ ಅಲಂಕಾರ ಮಾಡಿಕೊಳ್ಳಲು ಹೇಳಿದ. ದೇವರು ನನಗೆ ಎಲ್ಲ ಕಿತ್ತು ಕೊಂಡರೂ ಸ್ವಲ್ಪ ಸೌಂದರ್ಯ ಕೊಟ್ಟಿದ್ರಿಂದನೋ ಎನೋ ಅಣ್ಣನ ಸ್ನೇಹಿತ ರವಿ ನನ್ನ ಮೆಚ್ಚಿಕೊಂಡರು. ನೀನು ಭೂಮಿ ಅವನು ರವಿ, ನಿನಗೆ ಬೆಳಕು ಕೋಡ್ತಾನೆ ಅಂತೇಳಿ ಮದುವೆ ತಯಾರಿ ಮಾಡೆ ಬಿಟ್ಟ. ಚಿಕ್ಕಮ್ಮನಿಗೆ ಮನೆಕೆಲ್ಸಕ್ಕೆ ಮಾತ್ರ ತೊಂದರೆ ಆದರೂ ಹೆಂಗೊ ಇವಳನ್ನ ಸಾಗಿ ಹಾಕಿದ್ರೆ ಸಾಕು ಅನ್ನಿಸಿತ್ತು.

ರವಿಗೆ ತಂದೆ ಇರಲಿಲ್ಲ. ಅಮ್ಮ ಮತ್ತು ತಂಗಿ ಸುಜಾತ. ತಂಗಿ ಮದುವೆ ಮಾಡಿ ಮನೆ ಜವಬ್ದಾರಿ ಅವರೆ ಹೊತ್ತಿದ್ದರು. ನನ್ನ ಅಣ್ಣ ರವಿ ಹತ್ತಿರ ನಾನು ಪಿ.ಯು.ಸಿ ಓದಿದ್ದೀನಿ ಅಂತೇಳಿ ಅವರ ಮನೆಯವರನ್ನೆಲ್ಲಾ ಒಪ್ಪಿಸಿದ್ದ. ಕೊರಳಿಗೆ ಮಾಂಗಲ್ಯ ಬಂದೆ ಬಿಟ್ಟಾಗ ಭಯ ಶುರುವಾಯಿತು. ಅಪ್ಪ ಚಿಕ್ಕಮ್ಮನಿಗೆ ನಮಸ್ಕರಿಸಿ, ತಂಗಿ ತಮ್ಮ ಇಬ್ಬರಿಗೂ ಮುತ್ತಿಟ್ಟು ಗಂಡನ ಮನೆ ತಲುಪಿದೆ. ಬೆಂಗಳೂರಿನ ಜೀವನ ನನಗೆ ಹೊಸದು. ಅತ್ತೆ ನನ್ನ ಸೊಸೆ ತರ ನೋಡಲೆ ಇಲ್ಲ. ಸುಜಾತ ಗಂಡನ ಮನೆಗೆ ಹೋದ ಮೇಲೆ ನನ್ನನ್ನೆ ಮಗಳೆಂದು ಭಾವಿಸಿದ್ದರು. ನನಗೆ ತಾಯಿ ಪ್ರೀತಿ ಅಲ್ಲಿ ಸಿಕ್ಕಿ ಹಿಗ್ಗಿ ಹೋಗಿದ್ದೆ.

ದಿನ ಕಳೆದಂತೆ ರವಿಗೆ ನಾನು ಹೆಚ್ಚು ಓದಿಲ್ಲ ಅಂತ ತಿಳಿದು ನನ್ನ ಮೇಲೆ ಸ್ವಲ್ಪ ಬೇಸರ ಆದರೂ ಅತ್ತೆಗೆ ಏನೂ ಅನ್ನಿಸಲಿಲ್ಲ. ಅವರು ನಿವೃತ್ತ ಶಿಕ್ಷಕಿ ಯಾದ್ದರಿಂದ ಪರವಾಗಿಲ್ಲ ಬಿಡಮ್ಮ ಅಂತೇಳಿ ಅವರೇ ಕೆಲವು ಇಂಗ್ಲೀಷ್ ಪದಗಳನ್ನು ಹೇಳಿಕೊಟ್ಟು ಕಲಿಸಿದರು. ತಾಯಿ ಪ್ರೀತಿ ಸಿಕ್ಕ ಕೆಲದಿನಗಳ ನಂತರ ನಾನು ತಾಯಿಯಾಗುವ ಭಾಗ್ಯ ಬಂತು. ನನ್ನವರಿಗೆ ಸಂಸಾರ ಕಷ್ಟ ಅನ್ನಿಸಿತೊ ಎನೋ, ತಂಗಿ ಮದುವೆಯ ಸಾಲಗಳನ್ನು ತೀರಿಸಲೊ ಎನೋ, ವಿದೇಶಕ್ಕೆ ಹೋಗಿ ದುಡಿಯುವ ಆಸೆ ಚಿಗುರಿ ಮೂರು ತಿಂಗಳ ಗರ್ಭಿಣಿಯನ್ನು ಬಿಟ್ಟು ದೂರದ ದುಬೈಗೆ ವಿಮಾನ ಹತ್ತಿದರು. ಅಪ್ಪನಿಗೆ ನನ್ನ ನೆನಪಾದರೂ ಚಿಕ್ಕಮ್ಮನ ಅನುಮತಿ ಇಲ್ಲದೆ ಬರುವ ಆಗಿರಲಿಲ್ಲ. ಅಣ್ಣ ಒಂದೆರಡು ಸಲ ಬಂದು ಹೋಗಿದ್ದ. ಅಣ್ಣ ನನ್ನ ಗಂಡನ ಸ್ನೇಹಿತನಾದ್ದರಿಂದ ಅತ್ತೆಗೆ ಚೆನ್ನಾಗಿ ಪರಿಚಯವಿದ್ದು ಬೇಸರವಾದಾಗ ಅಣ್ಣನ ಜೊತೆ ಮಾತಾಡು ಅಂತ ಅತ್ತೆಯೇ ಫೋನ್ ಮಾಡಿಕೊಡುತ್ತಿದ್ದರು. ಒಂದಿನ ಅಣ್ಣ ತನ್ನ ಮದುವೆಯ ಪತ್ರಿಕೆಯೊಂದಿಗೆ ಬಂದಾಗ ನನ್ನಷ್ಟೇ ಅತ್ತೆಗೂ ಗಾಬರಿಯಾಯ್ತು. ತನ್ನ ಅಫೀಸಲ್ಲೆ ಕೆಲಸ ಮಾಡುವ ಹುಡುಗಿ, ಅವರ ಮನೆಯಲ್ಲೆ ಅಳಿಯನಾಗಿರಬೇಕೆಂದಿದ್ದಾರೆ ಅಂದ. ಅಣ್ಣನ ಮದುವೆಯಲ್ಲೆ ಅಪ್ಪ, ಚಿಕ್ಕಮ್ಮ, ತಂಗಿ, ತಮ್ಮ ಎಲ್ಲರನ್ನು ನೋಡಿದೆ. ನನ್ನವರು ಮದುವೆಗೂ ಬರಲು ಆಗಲಿಲ್ಲ. ಆಗೊಮ್ಮೆ ಹೀಗೊಮ್ಮೆ ಫೋನ್ ಮಾಡುತ್ತಿದ್ದರು. ಅಪ್ಪನಿಗೆ ನಾನು ಗರ್ಭಿಣಿ ಅಂತ ಗೊತ್ತದರೂ ಎನೂ ಕೇಳಲಿಲ್ಲ. ಚಿಕ್ಕಮ್ಮ ನನಗ್ಯಾಕೆ ಅಂತ ನನ್ನ ಆರೋಗ್ಯ ಸಹ ವಿಚಾರಿಸಲಿಲ್ಲ. ಕರುಳ ಕುಡಿ ಹೊರ ಜಗತ್ತು ಕಾಣಲು ಕಣ್ಣು ಬಿಟ್ಟಿತು. ನನಗೆ ಬೇಕಾದುದ್ದನ್ನು ಅತ್ತೆ ತಂದು ಕೊಟ್ಟು ಮೊಮ್ಮಗಳನ್ನು ಆಡಿಸುತ್ತಿದ್ದರು. ಮಾಸಗಳು ಉರುಳಿದಂತೆ ನನ್ನವರ ಸಂಪರ್ಕ ಕಡಿಮೆ ಆಗ್ತಾ ಬಂತು.

ಒಂದಿನ ಸುಜಾತ ಗಂಟು ಮೂಟೆ ಕಟ್ಟಿಕೊಂಡು ಮಗಳ ಜೊತೆ ಮನೆಗೆ ಬಂದು, ತನ್ನ ಗಂಡ ಸರಿ ಇಲ್ಲ, ದಿನ ಕುಡಿದು ಬಂದು ಬಡಿತಾನೆ, ನಾನು ಇನ್ಮೇಲೆ ಅಲ್ಲಿಗೆ ಹೋಗಲ್ಲ ಅಂತೇಳಿ ಇಲ್ಲೆ ಉಳಿದಳು. ಅತ್ತೆಗೆ ಯೋಚನೆ ಶುರುವಾಗಿ ಆರೋಗ್ಯ ಏರುಪೇರಾಗುತ್ತಿತ್ತು. ಮನೆಯ ಖರ್ಚೆಲ್ಲಾ ಅವರ ಪಿಂಚಣಿಯಿಂದಲೆ ನಡೆಯುತ್ತಿದ್ದರೂ ಮಗ ಇಲ್ಲದ್ದರಿಂದ ಮಗಳೆ ಮನೆಯ ಅಧಿಕಾರ ಹಿಡಿಯಲಾರಂಭಿಸಿದಳು. ನನ್ನವರು ಹಣ ಕಳಿಸುತ್ತಿರಲಿಲ್ಲ. ತಂಗಿಯ ಮದುವೆ ಸಾಲ ತೀರಿಸುತ್ತಿದ್ದರಿಂದ ನಾನು ಎನೂ ಕೇಳುತ್ತಿರಲಿಲ್ಲ.

ಒಂದು ಮುಂಜಾನೆ ರವಿ ದುಬೈನಲ್ಲಿ ಅಪಘಾತಕೀಡಾಗಿ ಕೊನೆಯುಸಿರೆಳೆದರು ಅನ್ನೋ ಫೋನಿನ ಸುದ್ದಿ ಬೆಚ್ಚಿ ಬೀಳಿಸಿತು. ನಾನು ಅತ್ತೆ ದಿಗ್ ಭ್ರಮೆಗೊಂಡು ದಿಕ್ಕು ತೋಚದಂತಾಯಿತು. ಕಾಲು ಸ್ವಾಧೀನ ಕಳೆದುಕೊಂಡು ಕಣ್ಣು ಮೈಯಲ್ಲಿದ್ದ ನೀರನ್ನೆಲ್ಲಾ ಹೊರ ಹಾಕಿತು. ಆರು ದಿನಗಳಾದ ಮೇಲೆ ಪೆಟ್ಟಿಯಲ್ಲಿ ಮಲಗಿದ್ದ ಅವರ ಪಾರ್ಥಿವ ಶರೀರ ಮನೆ ತಲುಪಿದಾಗ ಎನೂ ಅರಿಯದ ನನ್ನ ಮಗಳು ಅಪ್ಪನನ್ನು ಮಾತನಾಡಿಸುತ್ತಿದ್ದಳು. ಅಣ್ಣ ಬಂದು ಎಲ್ಲಾ ಕಾರ್ಯ ಮುಗಿಸಿ ಹೊರಟನು. ಒಂದೆರಡು ದಿನ ಮನೆಗೆ ಬಾ ಅಂತ ಕರೆದರೂ ಅತ್ತೆಯನ್ನು ಬಿಟ್ಟು ನಾನೆಲ್ಲೂ ಹೋಗಲಿಲ್ಲ. ನನ್ನ ಪಾಲಿನ ರವಿ ನನಗಿಲ್ಲದಿದ್ದರೂ ಆಕಾಶದಲ್ಲಿ ದಿನ ಬಂದು ಹೋಗುತ್ತಿದ್ದ. ಅತ್ತೆ ಕೊರಗಿ ಕೊರಗಿ ಹಾಸಿಗೆಯಲ್ಲೆ ಕೊನೆಯುಸಿರೆಳೆದಾಗ ನಾನಿನ್ನು ಕುಸಿದೆ. ಮನೆಗೆ ಗಂಡು ದಿಕ್ಕು ಇಲ್ಲದಂತಾಯಿತು. ಅತ್ತೆಗೆ ಬರುತ್ತಿದ್ದ ಪಿಂಚಣಿ ನಿಂತು ಹೋದಾಗ ನಾನು ಮಗಳನ್ನು ಮನೆಯಲ್ಲೆ ಬಿಟ್ಟು ಹತ್ತಿರವಿದ್ದ ಗಾರ್ಮೆಂಟ್ಸ್ ಗೆ ಸೇರಿದೆ. ಹಸಿವು ನನಗೆ ಕೆಲಸ ಕಲಿಸ ತೊಡಗಿತು. ಸುಜಾತ ತನ್ನ ಮಗಳೊಂದಿಗೆ ನನ್ನೊಂದಿಗೆಯೇ ಇದ್ದಳು. ಅವಳು ಸ್ವಲ್ಪ ಓದಿದ್ದರಿಂದ ಆಫೀಸ್ ಕೆಲಸ ಗಿಟ್ಟಿಸಲೇನು ಹೆಚ್ಚು ಸಮಯ ಬೇಕಿರಲಿಲ್ಲ. ಅವಳು ಸಹ ಮಗಳನ್ನು ಮನೆಯಲ್ಲೆ ಬಿಟ್ಟು ದುಡಿಯಲಾರಂಭಿಸಿದಳು.

ಅತ್ತೆ ಶಿಕ್ಷಕಿ ವೃತ್ತಿಯಿಂದ ಕೂಡಿಟ್ಟ ಹಣ ಮತ್ತು ನಿವೃತ್ತಿಯಾದಾಗ ಬಂದ ಹಣದಿಂದ ಮನೆ ಕೊಂಡು ಕೊಂಡಿದ್ದರಿಂದ ಸಧ್ಯ ಮನೆ ಬಾಡಿಗೆ ಕಟ್ಟುವ ಆಗಿಲ್ಲ ಅಂತ ದೇವರಿಗೆ ಕೈ ಮುಗಿಯುತ್ತಿದ್ದೆ. ದಿನಕಳೆದಂತೆ ಸುಜಾತ ಬದಲಾಗುತ್ತ ಹೋದಳು. ಮಗಳ ಮೇಲಿನ ಕಾಳಜಿ ಕಮ್ಮಿಯಾಗಿ ಸಂಜೆ ತಡವಾಗಿ ಬರುತ್ತಿದ್ದಳು. ಅವಳ ಆಫೀಸಿನ ಯುವಕ ನಾಗರಾಜ್ ಆಗಾಗ ಅವಳನ್ನು ಮನೆಗೆ ಬಿಡುತ್ತಿದ್ದವನು ಈಗ ಮನೆಗೆ ಬಂದು ಹೆಚ್ಚು ಸಮಯ ಇಲ್ಲೆ ಕಳೆಯಲು ಶುರು ಮಾಡಿದ. ನನಗೆ ಕಸಿವಿಸಿ ಆಗಿ ಒಂದೆರಡು ಬುದ್ಧಿಮಾತು ಹೇಳಿದರೂ ಅವಳು ಕೇಳುವ ಸ್ಥಿತಿಯಲಿರಲಿಲ್ಲ. ಅವಳ ಮಗಳು ಸ್ವಾತಿ ಸಹ ನನ್ನ ಮಗಳೊಂದಿಗೆ ಆಟ ಆಡುತ್ತ ಬೆರೆತು ಹೋಗಿದ್ದಳು.

ಕೆಲ ದಿನಗಳ ನಂತರ ಮಾತುಗಳು ಬದಲಾಗಿ ಅವಳ ಮನೆಯಲ್ಲಿ ನಾನು ಅವಳಿಗೆ ಭಾರವಾಗಿರುವ ತರಹ ನಡೆದುಕೊಳ್ಳಲಾರಂಬಿಸಿದಳು. ಕೆಂಡವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳಲಾಗದಂತೆ ನಾವಿರುವ ಮನೆ ತನ್ನದೆ ಎಂದು ಕಾಗದ ಪತ್ರಗಳನ್ನು ತೋರಿಸಿದಳು. ಅಷ್ಟೊಂದು ಅರಿವು ಇಲ್ಲದ ನಾನು ಅದನ್ನೆಲ್ಲ ಪರೀಕ್ಷಿಸಲಿಲ್ಲ. ಅತ್ತೆ ಇವಳ ಹೆಸರಿಗೆ ಬರೆದು ಕೊಟ್ಟಿದರೊ ಅಥವಾ ಇವಳೆ ಅತ್ತೆಯ ಸಹಿ ಮಾಡಿದ್ದಳೊ ನನಗೆ ಗೊತ್ತಿರಲಿಲ್ಲ. ಅವಳ ಸ್ನೇಹಿತ ನಾಗರಾಜನೊಂದಿಗೆ ಅವಳು ಇರುವುದಾಗಿ ಹೇಳಿದಾಗ ನಾನು ಮನೆ ಬಿಟ್ಟು ಹೊರಗಡೆ ಬಂದೆ. ಮಗಳ ಜೊತೆ ಹೊರಟಾಗ ಸ್ವಾತಿ ಸಹ ನನ್ನ ಮಗಳ ಜೊತೆ ಬರುತ್ತೀನಿ ಅಂತ ಹಠ ಹಿಡಿದಳು. ನಾಗರಾಜನಿಗೆ ಆ ಮಗು ಅಷ್ಟು ಇಷ್ಟವಿಲ್ಲದ ಕಾರಣಕ್ಕೊ ಎನೋ ಸುಜಾತ ಸ್ವಾತಿಯನ್ನು ತಡೆಯದೆ ಇದ್ದಾಗ ನಾನು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೊರಬಂದೆ.

ಅಣ್ಣನ ಮನೆಗೆ ಹೋಗಲು ಮನಸಾಗದೆ ಬೃಹತ್ ಬೆಂಗಳೂರಲ್ಲಿ ಆಶ್ರಯ ಕಷ್ಟವಾಯಿತು. ಹಣವಿಲ್ಲದೆ ಗಾರ್ಮೆಂಟ್ಸ್ ನಲ್ಲಿ ಸೆಕ್ಯುರಿಟಿಗೆ ಬೇಡಿಕೊಂಡು ಕೆಲದಿನ ಜನರೇಟರ್ ರೂಮಿನಲ್ಲೆ ವಾಸ ಮಾಡಿದೆ. ಸ್ವಲ್ಪ ಸಾಲ ಮಾಡಿ ಒಂದು ಬಾಡಿಗೆ ಮನೆ ಪಡೆದು ಈಗ ನಿಟ್ಟುಸಿರು ಬಿಡುತ್ತಿರುವಾಗ ಇನ್ನೊಂದು ಆತಂಕ ಶುರುವಾಯಿತು. ನಾನು ಜನರೇಟರ್ ರೂಮಿನಲ್ಲಿದ್ದ ವಿಷಯ ತಿಳಿದ ನನ್ನ ಸೂಪರ್ ವೈಸರ್ ಚಂದ್ರು ಕರೆದು ಕೇಳಿದಾಗ ನನ್ನ ಕಥೆ ಹೇಳಿದೆ. ಅವರಿಗೆ ಎನನಿಸಿತೊ ಗೊತ್ತಿಲ್ಲ, ಮರುದಿನ ನನ್ನ ಮದುವೆಯಾಗುವುದಾಗಿ ಹೇಳಿ ಒಪ್ಪಿಗೆ ಕೇಳಿದರು. ನನಗೆ ಮತ್ತೆ ಆಕಾಶ ಕಳಚಿ ಬಿದ್ದಂತಾಯಿತು. ಯೋಚಿಸಲು ಸಮಯ ಬೇಕೆಂದು ಹೊರಬಂದೆ. ರವಿಯನ್ನು ಕಳೆದು ಕೊಂಡ ಭೂಮಿಗೆ ಚಂದ್ರ ಬೆಳಕು ಕೊಡುತ್ತಾನೆಯೇ....ನನ್ನ ನಂಬಿರುವ ಎರಡು ಮಕ್ಕಳನ್ನು ಸ್ವೀಕರಿಸುವನೇ....ನಂಬಿ ಹೋಗಲೆ...? ಮನಸ್ಸು ಒಪ್ಪುತ್ತಿಲ್ಲ .... ನೀವೆ ಹೇಳಿ...








ಬುಧವಾರ, ಆಗಸ್ಟ್ 15, 2012

ಹ(ಅ)ವಳ





ನಲ್ಲೆ,

ನೀನೆ ಬೇಕೆಂದೆ

ಮುತ್ತು, ರತ್ನ, ಹವಳ....

ರತ್ನ ಸಿಗಲಿಲ್ಲ

ಮುತ್ತು ಅವಳಲ್ಲೆ ಇಹುದು

ಎಂದು ತಂದೆ ಅವಳ....   

       

ಶುಕ್ರವಾರ, ಜುಲೈ 27, 2012

ಪರಿಮಳ




ನಲ್ಲೆ ನೀನಿಲ್ಲದಾಗ
ಮನೆ ಸ್ವಚ್ಚವಿರೊಲ್ಲವೆಂದು
ಪಡೆಯದಿರು ಕಳವಳ....

ನೀನಿಲ್ಲದಿದ್ದರೂ
ಮನೆಯಲ್ಲೀಗ ಸದಾ
ತುಂಬಿರುವುದು ಪರಿಮಳ.....





ಶುಕ್ರವಾರ, ಜನವರಿ 20, 2012

ಅರ್ಪಣೆ

ನನ್ನ ಬದುಕಿನಲ್ಲಿ ಹೊಸ ಮಜಲುಗಳನ್ನೇ ಸೃಷ್ಟಿಸಿದ ನನ್ನ ಬಾಳ ಸಂಗಾತಿಗೆ...


ಮೃದುವಾದ ಮನಸು
ಹೂವಿನಂತ ಬೆಡಗು
ಕಪಟವಿಲ್ಲದ ಗು
ಕೂಡಿ ಆಗಿರುವೆಯಾ ನೀ ಸುಗುಣ


ನಿಶ್ಕಲ್ಮಶ ಹೃದಯ
ನಡೆನುಡಿ ವಿನಯ
ಯಾರಿಗೂ ಮಾಡದು ಗಾಯ
ಸನಿಹವಿದ್ದೆಡೆ ನೋವು ಮಂಗಮಾಯ


ಸಾಹಿತ್ಯದಲ್ಲಿ ಆಸಕ್ತಿ
ಗುರುಹಿರಿಯರಲ್ಲಿ ಭಕ್ತಿ
ಇನಿಯನಿಗೆ ತುಂಬಿರುವೆ ಶಕ್ತಿ
ಕಂದನಿಗಾಗಿರುವೆ ಸ್ಪೂರ್ತಿ


ಜಾಣೆಯರಲ್ಲಿ ಜಾಣೆ 
ಸುಂದರ ಗುಣ ಸಂಪನ್ನೆ
ಎನಗೊಲಿದ ಮನದನ್ನೆ
ನಿನಗಿದೊ ಜನುಮದಿನದ ಶುಭಾಶಯ......